ಪ್ರತ್ಯೇಕ ವ್ಯಕ್ತಿಗಾಗಿ ಮಾಡುವ ವೈದಿಕ ಪೂಜಾ ವಿಧಾನಕ್ಕೆ ಶಾಂತಿ ಎನ್ನುತ್ತಾರೆ. ಯಾವ ಕಾರಣಕ್ಕಾಗಿ ಯಾವ ಶಾಂತಿಯನ್ನು ಮಾಡಬೇಕು? ಮಗುವಿನ ಜನನ ಕಾಲದಲ್ಲಿ ನಾನಾ ವಿಧ ದೋಷಾದಿಗಳು ಬರುತ್ತವೆ. ಇದನ್ನು ಗುರುಗಳ ಮುಖೇನ ತಿಳಿದು ಬಂದಿರುವ ದೋಷ ನಿವಾರಣೆಗೆ ಶಾಂತ್ಯಾದಿಗಳನ್ನು ಮಾಡಿಕೊಳ್ಳಬೇಕು.
- ಕೃಷ್ಣ ಚತುರ್ದಶಿ ಜನನ ಶಾಂತಿ: ಮಗು ಕೃಷ್ಣ ಪಕ್ಷದ ಚತುರ್ದಶಿಯ ದಿನ ಜನನವಾದಲ್ಲಿ ಅನೇಕವಾದ ಅನಿಷ್ಠ ಫಲಗಳು ಬರುತ್ತದೆ. ಚತುರ್ದಶಿ ತಿಥಿಯ ಕಾಲವನ್ನು ಆರು ಭಾಗ ಮಾಡಿ; ಒಂದನೇಯ ಭಾಗವನ್ನು ಶುಭ ಎಂತಲೂ, ಎರಡನೇಯ ಭಾಗವನ್ನು ತಂದೆಗೆ ಅನಿಷ್ಠ ಎಂತಲೂ, ಮೂರನೇಯ ಭಾಗವನ್ನು ತಾಯಿಗೆ ಅನಿಷ್ಠ ಎಂತಲೂ, ನಾಲ್ಕನೇಯ ಭಾಗವನ್ನು ಮಾವನಿಗೆ ಅನಿಷ್ಠ ಎಂದೂ, ಐದನೇಯ ಭಾಗವನ್ನು ವಂಶನಾಶ ಎಂತಲೂ, ಆರನೇಯ ಭಾಗವನ್ನು ಧನಹಾನಿ ಎಂದೂ ಶಾಸ್ತ್ರದಲ್ಲಿ ಹೇಳಿದೆ.
- ಸಿನೀವಾಲೀ-ಕುಹೂ ಜನನ ಶಾಂತಿ: ಮಗುವು ಅಮಾವಾಸ್ಯೆಯ ದಿನದಂದು ಜನಿಸಿದಲ್ಲಿ, ಅಮಾವಾಸ್ಯೆಯ ಪರಮ ಘಟಿಯನ್ನು 8 ಭಾಗವನ್ನು ಮಾಡಿ ಪ್ರಥಮ ಭಾಗ ಜನನಕ್ಕೆ ಸಿನೀವಾಲೀ, ಅಷ್ಟಮ ಭಾಗಕ್ಕೆ ಕುಹೂ ಜನನ ಎಂದೂ ಕರೆಯುತ್ತಾರೆ. ಈ ಜನನದಲ್ಲಿ ಬರುವ ದೋಷ ನಿವಾರಣೆಗೆ ಶಾಂತ್ಯಾದಿಗಳನ್ನು ಮಾಡಿಸಿಕೊಳ್ಳಬೇಕು.
- ದರ್ಶ ಜನನ ಶಾಂತಿ: ಅಮಾವಾಸ್ಯೆ ತಿಥಿಯ ಪರಮ ಘಟಿಯನ್ನು ಭಾಗವನ್ನಾಗಿ ಮಾಡಿದಾಗ 2ನೇಯ ಭಾಗದಿಂದ 6ನೇ ಭಾಗದವರೆಗೆ ಹುಟ್ಟಿದ ಮಗುವಿಗೆ ಬರುವ ದೋಷ ನಿವಾರಣೆಗೆ ದರ್ಶ ಜನನ ಶಾಂತಿ ಅಥವಾ ಅಮಾವಾಸ್ಯೆ ಜನನ ಶಾಂತಿ ಮಾಡಿಸಿಕೊಳ್ಳಬೇಕು.
- ಸೂರ್ಯ ಸಂಕ್ರಾಂತಿ ಜನನ ಶಾಂತಿ ಮತ್ತು ವ್ಯತಿಪಾತ, ವೈದ್ರತಿ, ಅತೀಗಂಡ, ಗಂಡಯೋಗ ಜನನ ಶಾಂತಿ.
- ಆಶ್ಲೇಷಾ ಜನನ ಶಾಂತಿ: ಮಗುವು ಆಶ್ಲೇಷಾ ನಕ್ಷತ್ರ ಇರುವ ಸಮಯದಲ್ಲಿ ಜನಿಸಿದರೆ ದೋಷಾದಿಗಳ ನಿವಾರಣೆಗೆ ಶಾಂತಿಗಳನ್ನು ಮಾಡಿಸಿಕೊಳ್ಳಬೇಕು. ಮೊದಲನೇ ಪಾದ ಜನನಕ್ಕೆ ಶುಭ ಫಲ, ದ್ವಿತೀಯ ಪಾದ ಜನನಕ್ಕೆ ಧನನಾಶ, ತೃತೀಯ ಪಾದ ಜನನಕ್ಕೆ ತಾಯಿಗೆ ಅನಿಷ್ಠ.
- ಜ್ಯೇಷ್ಠ ನಕ್ಷತ್ರ ಜನನ ಶಾಂತಿ: ಮಗುವು ಜ್ಯೇಷ್ಠ ನಕ್ಷತ್ರ ಇರುವ ಸಮಯದಲ್ಲಿ ಜನಿಸಿದರೆ ದೋಷಾದಿಗಳ ನಿವಾರಣೆಗೆ ಶಾಂತಿಗಳನ್ನು ಮಾಡಿಸಿಕೊಳ್ಳಬೇಕು. ವಿಶೇಷತಃ 4ನೇ ಪಾದದಲ್ಲಿ ಜನಿಸಿದರೆ ತಂದೆ- ತಾಯಿಗೆ ಅನಿಷ್ಠ.
- ಮೂಲಾ ನಕ್ಷತ್ರ ಜನನ ಶಾಂತಿ: ಮಗುವು ಮೂಲಾ ನಕ್ಷತ್ರ ಇರುವ ಸಮಯದಲ್ಲಿ ಜನಿಸಿದರೆ 1ನೇ ಪಾದಕ್ಕೆ ಅತೀ ಅನಿಷ್ಠ. 2ನೇ ಪಾದಕ್ಕೆ ತಾಯಿಗೆ ಅನಿಷ್ಠ. 3ನೇ ಪಾದಕ್ಕೆ ಧನನಾಶ. 4ನೇ ಪಾದಕ್ಕೆ ಕುಲನಾಶ. ಹೆಣ್ಣು ಮಗು ಈ ನಕ್ಷತ್ರದಲ್ಲಿ ಜನಿಸಿದರೆ ಗಂಡನ ತಂದೆಗೆ ಅತೀ ಅನಿಷ್ಠ.
- ಗ್ರಹಣ ಜನನ ಶಾಂತಿ: ಮಗುವು ಸೂರ್ಯ ಅಥವಾ ಚಂದ್ರ ಗ್ರಹಣ ಕಾಲದಲ್ಲಿ ಜನಿಸಿದರೆ ದೋಷ ನಿವಾರಣೆಗೆ ಶಾಂತ್ಯಾದಿಗಳನ್ನು ಮಾಡಿಸಿಕೊಳ್ಳಬೇಕು.
- ಏಕ ನಕ್ಷತ್ರ ಜನನ ಶಾಂತಿ: ತಾಯಿ, ತಂದೆ, ಅಣ್ಣ-ತಮ್ಮ ಎಲ್ಲರ ನಕ್ಷತ್ರ ಒಂದೇ ಆದಲ್ಲಿ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
- ವಿಷ ಘಟಿ ಜನನ ಶಾಂತಿ: ಮಗುವು ವಿಷ ನಾಡಿಯಲ್ಲಿ ಜನಿಸಿದರೆ ಸರ್ವರಿಷ್ಠ. ಆದ್ದರಿಂದ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
- ತ್ರಿಕ ಪ್ರಸವ ಶಾಂತಿ: ತಾಯಿಗೆ ಏಕ ಕಾಲದಲ್ಲಿ ಮೂರು ಮಗುವಿನ ಜನನವಾದರೆ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
- ಭದ್ರಾ ಜನನ ಶಾಂತಿ: ಭದ್ರಾ ಯೋಗದಲ್ಲಿ ಜನಿಸಿದ ಮಗುವಿಗೆ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
- ಅಧೋಮುಖ ಜನನ ಶಾಂತಿ: ಮಗು ಜನಿಸಿವಾಗ ಕೆಳಮುಖವಾಗಿ ಜನಿಸಿದರೆ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
- ಸದಂತ ಜನನ ಶಾಂತಿ: ಮಗು ಹುಟ್ಟಿದಾಗಲೇ ಹಲ್ಲು ಇದ್ದರೆ ಬರುವ ದೋಷ ನಿವಾರಣೆಗಾಗಿ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
- ಯಮಳ ಜನನ ಶಾಂತಿ: ಏಕ ಕಾಲದಲ್ಲಿ ಎರಡು ಮಗುವಿನ ಜನನವಾದಲ್ಲಿ ದೋಷ ನಿವಾರಣೆಗಾಗಿ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
- ಪ್ರಸವ ವೈಕ್ರತಿ ಜನನ ಶಾಂತಿ: ಮಗು ಜನಿಸುವಾಗ ಅಂಗ ವಿಕಲವಿದ್ದಲ್ಲಿ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
- ದಿನ ಕ್ಷಯ, ವ್ಯತಿಪಾತ ಯೋಗಾದಿ ಜನನ ಶಾಂತಿ.
- ಬಾಲಾರಿಷ್ಠ ಜನನ ಶಾಂತಿ: ಮಗು ಜನಿಸಿದಾಗ ಜನ್ಮದಲ್ಲಿ ರವಿ, ಕುಜ, ಶನಿ, ರಾಹು, ಕೇತುಗಳು ವಿಷಮ ಸ್ಥಿತವಾದಲ್ಲಿ ವಿಪರೀತ ಕಷ್ಟಗಳನ್ನು ಕೊಡುತ್ತದೆ. ಈ ಕಷ್ಟಗಳ ನಿವಾರಣೆಗಾಗಿ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು. ಈ ಶಾಂತಿಯನ್ನು ಮಗುವಿನ ಜನ್ಮದ ನಂತರದ 12ನೆ ದಿನದ ಮೇಲೆ ಮಗು ಚಿಕ್ಕದಿದ್ದಾಗಲೆ ಮಾಡಿಸಿಕೊಳ್ಳುವುದು ಒಳ್ಳೆಯದು.
- ಬಾಲಗ್ರಹ ಶಾಂತಿ: ಮಗುವು ಪೂರ್ವ ಜನ್ಮಂತರದಲ್ಲಿ ಮಾಡಿದ ದೇವರ, ವೇದಗಳ, ಶಾಸ್ತ್ರಗಳ ಮತ್ತು ಗುರು ಹಿರಿಯರ ನಿಂದನಾದಿ ಸರ್ವ ಪಾತಕಗಳಿಂದ ಬರುವ ಪೀಡಾ ನಿವಾರಣೆಗಾಗಿ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
- ಬಾಲ ಮಾರ್ಕಾಂಡೇಯ ಶಾಂತಿ: ಮಗುವಿಗೆ ಮಹತ್ ಬಾಲಾರಿಷ್ಟ ವಶದಿಂದ ಆಯುಷ್ಯಕ್ಕೆ ಕಂಟಕ ಸೂಚಿಸಿದಲ್ಲಿ ಅನಿಷ್ಟ ಪರಿಹಾರಕ್ಕಾಗಿ ಈ ಶಾಂತಿಯನ್ನು ಮಾಡಿಸಬೇಕು.
- ರೋಹಿಣಿ ನಕ್ಷತ್ರ ಜನನ ಶಾಂತಿ: ಮಗುವು ರೋಹಿಣಿ ನಕ್ಷತ್ರದಲ್ಲಿ ಜನಿಸಿದರೆ ಮಾವನಿಗೆ ಅರಿಷ್ಟ ಸೂಚನೆ ಆಗುವುದರಿಂದ ಈ ಶಾಂತಿಯನ್ನು ಮಾಡಿಸಬೇಕು.
- ಕುಜ-ರಾಹು ಸಂಧಿ ಶಾಂತಿ: ನವಗ್ರಹದಲ್ಲಿ ಒಂದೊಂದು ಗ್ರಹಕ್ಕೆ ಇಷ್ಟು ವರ್ಷಗಳು ಮನುಷ್ಯನ ಜೀವನದಲ್ಲಿ ಅಧಿಪತ್ಯ (ಅಧಿಕಾರ) ಎಂದಿರುತ್ತದೆ. ಆದರೆ ಪರಸ್ಪರ ಶತ್ರು ಗ್ರಹಗಳ ಅಧಿಕಾರ ಅವಧಿ ಮುಗಿದು ಇನ್ನೊಂದು ಶತ್ರು ಗ್ರಹದ ಅಧಿಕಾರ ಆರಂಭ ಕಾಲದಲ್ಲಿ 6 ತಿಂಗಳು ಮುಂಚಿತವಾಗಿ ಸಂಧಿ ಶಾಂತಿ ಮಾಡಿಸುತ್ತಾರೆ. ಇಲ್ಲಿ ಕುಜ ದಶಾ 7 ವರ್ಷಗಳು ಮುಗಿದು ರಾಹು ದಶಾ 18 ವರ್ಷಗಳು ಆರಂಭವಾಗುವ ಸಮಯಕ್ಕೆ ಈ ಶಾಂತಿಯನ್ನು ಮಾಡಿಸಬೇಕು. ಈ ಸಂಧಿ ಕಾಲದ ವಿಶೇಷವಾಗಿ ಗಂಡಸರಿಗಿಗೆ ಹೆಚ್ಚು ಹಾನಿಕಾರಕ ಆಗಿರುತ್ತದೆ. ಆಯುಷ್ಯದಲ್ಲಿ ಒಂದು ಕಂಟಕ ಎನ್ನಬಹುದು.
- ರಾಹು- ಬೃಹಸ್ಪತಿ ಸಂಧಿ ಶಾಂತಿ: ರಾಹುವಿನ ಅಧಿಕಾರ ಅವಧಿ 18 ವರ್ಷಗಳು ಕಳೆದು ಗುರುವಿನ 16 ವರ್ಷದ ಅಧಿಕಾರದ ಅವಧಿ ಆರಂಭವಾಗುವ 6 ತಿಂಗಳು ಮೊದಲು ಈ ಶಾಂತಿಯನ್ನು ಅಗತ್ಯವಾಗಿ ಮಾಡಿಸಿಕೊಳ್ಳಬೇಕು. ಈ ಸಂಧಿಕಾಲವು ವಿಶೇಷವಾಗಿ ಮಹಿಳೆಯರಿಗೆ ಹೆಚ್ಚು ಹಾನಿಕಾರಕ ಆಗಿರುತ್ತದೆ.
- ಶುಕ್ರಾದಿತ್ಯ ಸಂಧಿ ಶಾಂತಿ: ಶುಕ್ರ ಅಧಿಕಾರ ಅವಧಿ 20 ವರ್ಷಗಳು ಕಳೆದು ಸೂರ್ಯನ 6 ವರ್ಷದ ಅಧಿಕಾರದ ಅವಧಿ ಆರಂಭವಾಗುವ 6 ತಿಂಗಳು ಮೊದಲು ಈ ಶಾಂತಿಯನ್ನು ಅಗತ್ಯವಾಗಿ ಮಾಡಿಸಿಕೊಳ್ಳಬೇಕು. ಈ ಸಂಧಿಕಾಲವು ಪುರುಷ ಮತ್ತು ಮಹಿಳೆ ಇಬ್ಬರಿಗೂ ಹಾನಿಕಾರಕ ಆಗಿರುತ್ತದೆ.
- ಷಷ್ಟ್ಯಬ್ಧ ಅಥವಾ ಉಗ್ರರಥ ಶಾಂತಿ: ಮನುಷ್ಯನು ತನ್ನ ಜೀವನದ ಕಷ್ಟ-ಸುಖಗಳನ್ನು ಅನುಭವಿಸುತ್ತ ಸಕಾಲದಲ್ಲಿ ವಿವಾಹವಾಗಿ ಪತ್ನಿಯನ್ನು ಒಡಗೂಡಿ ಮಕ್ಕಳ ಆಗು ಹೋಗುಗಳನ್ನು ಪೂರೈಸುತ್ತ ತನ್ನ ಜೀವನದ 60ನೇ ಸಂವತ್ಸರವನ್ನು ಪ್ರವೇಶಿಸಿದಾಗ ಜನ್ಮ, ನಕ್ಷತ್ರದಲ್ಲಿ ಈ ಶಾಂತಿಯನ್ನು ಮಾಡ ಬೇಕು.
ಇದನ್ನು ಏಕೆ ಮಾಡ ಬೇಕು?
ಇದನ್ನು ಮುಂದಿನ ಜೀವನದಲ್ಲಿ ಬರುವಂತಹ ಅಪಮೃತ್ಯು, ದುಃಸ್ವಪ್ನ ದರ್ಶನ, ಗೃಹಪೀಡೆ, ವಿವಿಧ ರೋಗಬಾಧೆ, ಛಾಯಾ ವಿಕೃತಿ. ಭೂತ-ಪ್ರೇತಾದಿ ಪೀಡಾ ರೂಪಕವಾದಂತಹ ನಾನಾ ವಿಧ ಅರಿಷ್ಟ ನಿವಾರಣೆಗಾಗಿ ಮಾಡುವಂತಹ ಶಾಂತಿಯನ್ನು ಉಗ್ರರಥ ಶಾಂತಿ ಎನ್ನುತ್ತೇವೆ. ಈ ವಿಧಿಯಲ್ಲಿ ಗಣಪತಿ, ನವಗ್ರಹ ದೇವತೆಗಳನ್ನು, ಪೀಡಾ ಪರಿಹಾರಕನಾದ ಮೃತುಂಜಯನನ್ನು ಅಶ್ವತ್ಥಾಮಾದಿ ಸಪ್ತ ಚಿರಂಜೀವಿಗಳನ್ನು, ಮೃತ್ಯುವನ್ನೇ ಜಯಿಸಿದ ಮಾರ್ಕೆಂಡೆಯನನ್ನು, ಆಯುರ್ದೇವತೆ ನಕ್ಷತ್ರ ದೇವತೆಗಳನ್ನು ಆರಾಧಿಸಬೇಕು. ಜಪ, ಹೋಮ, ತರ್ಪಣ, ಮಾರ್ಜನ, ಬ್ರಾಹ್ಮಣ ಭೋಜನವನ್ನಾಚರಿಸಿ ಗುರು-ಹಿರಿಯರ ಆಶೀರ್ವಾದವನ್ನು ಪಡೆಯಬೇಕು. ಈ ವಿಧಿಯಲ್ಲಿ ಉಗ್ರನೆಂಬ ಹೆಸರಿನ ಮೃತ್ಯುಂಜಯನು ಪ್ರಧಾನ ದೇವತೆಯಾದ್ದರಿಂದ ಉಗ್ರರಥ ಶಾಂತಿ ಎಂಬ ಹೆಸರು ಬಂತು. ಈ ವಿಧಿಯ ಅಂತ್ಯದಲ್ಲಿ ಕಲಶ ತೀರ್ಥಸ್ನಾನ ಮತ್ತು ಮಂಗಳ ದ್ರವ್ಯ ದರ್ಶನ ಅಲ್ಲದೇ ಪುನಃ ಮಂಗಳಸೂತ್ರ ಕಟ್ಟುವುದು ಮುಖ್ಯವಾಗಿರುತ್ತದೆ. - ಗ್ರಹ ಶಾಂತಿ: ಮನೆಯಲ್ಲಿ ಸಾಲದ ಬಾಧೆ, ಅಶಾಂತಿ, ಕೆಟ್ಟ ಕನಸು ಮತ್ತು ರೋಗ-ರುಜಿನಗಳಿಂದ ತೊಂದರೆ ಅನುಭವಿಸುತ್ತಿದ್ದಲ್ಲಿ ಗ್ರಹ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
- ವಾಸ್ತು ಶಾಂತಿ: ಹೊಸದಾಗಿ ತೆಗೆದು ಕೊಂಡ ಮನೆ ಅಥವಾ ವಸತಿ ಸಮುಚ್ಛಯ ನಿರ್ಮಿಸುವಾಗ ಸ್ಥಳದಲ್ಲಿ ಇರುವಂತಹ ನೂನ್ಯತೆಯನ್ನು ಹೊಗಲಾಡಿಸಿ ಸುಖ ಶಾಂತಿ, ಸಮೃದ್ಧಿಯಿಂದ ನೆಲೆಸುವುದಕ್ಕಾಗಿ ವಾಸ್ತು ಶಾಂತಿಯನ್ನು ಮಾಡುವುದು ಅಗತ್ಯ.
- ರಾಕ್ಷೋಘ್ನ ಶಾಂತಿ: ಹೊಸ ಮನೆಯನ್ನು ನಿರ್ಮಿಸುವಾಗ ಸ್ಥಳದಲ್ಲಿ ಉಪಯೋಗಿಸಿರುವ ಮರದ ಸಲಕರಣೆಗಳಲ್ಲಿ ಇರುವ ಭೂತ, ಪ್ರೇತ, ಪಿಶಾಚಿ ಬಾಧೆ ನಿವಾರಣೆಗಾಗಿ ವಾಸ್ತು ಹೋಮದ ಪೂರ್ವದಲ್ಲಿ ಈ ಹೋಮವನ್ನು ರಾತ್ರಿಯಲ್ಲಿ ಮಾಡಬೇಕು.
- ಗೇಹಾಭಿವೃದ್ಧಿ ಶಾಂತಿ: ದೇವಸ್ಥಾನದಲ್ಲಿ ಸ್ಥಾಪಿಸಿರುವ ವಿಗ್ರಹಕ್ಕೆ ದೇವರ ಸಾನಿಧ್ಯ ಪ್ರಾಪ್ತಿಗಾಗಿ, ದೇವಾಲಯದ ಅಭಿವೃದ್ಧಿಗಾಗಿ ಈ ಶಾಂತಿಯನ್ನು ಮಾಡಬೇಕು.
- ಸರ್ವಾದ್ಭುತ ಶಾಂತಿ: ಮನೆಯಲ್ಲಿ ಅಮಂಗಲವಾದ ಘಟನೆಗಳು ನಡೆದಾಗ; ಉದಾಹರಣೆಗೆ ಮನೆಗೆ ಬೆಂಕಿ ತಗಲುವುದು, ಮನೆಗೆ ಕಾಗೆ ಪ್ರವೇಶಿಸುವುದು, ಮನೆಯಲ್ಲಿ ಜೇನುಗೂಡು ಕಟ್ಟುವುದು ಮನೆಯ ಒಂದು ಭಾಗ ಕುಸಿಯುವುದು ಇಂತಹ ಅನಿಷ್ಠಗಳಿದ್ದಲ್ಲಿ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
- ಗ್ರಾಮೊತ್ಪಾತ ಶಾಂತಿ: ಗ್ರಾಮದಲ್ಲಿ ಉತ್ಪನ್ನವಾಗಿರುವ ನಾನಾವಿಧ ಭಾದೆ ನಿವಾರಣೆಗೆ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
- ರಕ್ತ ವಲ್ಮೀಕ ಶಾಂತಿ: ದೇವಾಲಯದಲ್ಲಿ, ಮನೆಯಲ್ಲಿ ಅಥವಾ ಸಭಾಸ್ಥಾನದಲ್ಲಿ ಉತ್ಪತ್ತಿಯಾಗಿರುವ ಹುತ್ತವು ಅಶುಭ ಸೂಚಕ ಆಗಿರುವುದರಿಂದ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
- ವಾನರ ಪ್ರವೇಶ ಶಾಂತಿ: ಮನೆಯೊಳಗೆ ವಾನರ ಪ್ರವೇಶವಾದಲ್ಲಿ ಬರುವ ಅಪಮೃತ್ಯು, ಮಹಾರೋಗಾದಿ ಸರ್ವ ಅಮಂಗಲ ನಿವಾರಣೆಗಾಗಿ ಈ ಶಾಂತಿಯನ್ನು ಮಾಡಬೇಕು.
- ಮರ್ಕಟ ಪ್ರವೇಶ ಶಾಂತಿ: ಮನೆಯೊಳಗೆ ಕೃಷ್ಣಮುಖ ವಾನರ ಪ್ರವೇಶ ಆದಲ್ಲಿ ಬರುವ ಅಪಮೃತ್ಯು, ಮಹಾರೋಗಾದಿ ಸರ್ವ ಅಮಂಗಲ ನಿವಾರಣೆಗಾಗಿ ಈ ಶಾಂತಿಯನ್ನು ಮಾಡಬೇಕು.
- ಮಹಿಷಿ ಪ್ರವೇಶ ಶಾಂತಿ: ಮನೆಯೊಳಗೆ ಎಮ್ಮೆ ಅಥವಾ ಕೋಣ ಪ್ರವೇಶಿಸಿದರೆ ಸೂಚಿತ ಅಪಮೃತ್ಯು ಹಾಗೂ ಸರ್ವ ಅಮಂಗಲ ನಿವಾರಣೆಗಾಗಿ ಈ ಶಾಂತಿಯನ್ನು ಮಾಡಬೇಕು.
- ದೀಪ ಪತನ ಶಾಂತಿ: ಮನೆಯಲ್ಲಿ ಪೂಜೆ ಮಾಡುತ್ತಿರುವಾಗ ಉರಿಯುತ್ತಿರುವ ದೀಪ ಆರಿ ಹೋದಲ್ಲಿ ಅಮಂಗಲ ನಿವಾರಣೆಗಾಗಿ ಈ ಶಾಂತಿಯನ್ನು ಮಾಡಬೇಕು.
- ಭೀತಿಹರ ದಕ್ಷಾಕರ ದುರ್ಗಾ ಶಾಂತಿ: ಗ್ರಹ ಪೀಡೆಗಳಿಂದ ಪುನಃ ಪುನಃ ಆಗುತ್ತಿರುವ ತೊಂದರೆಗಳ ನಿವಾರಣೆಗೆ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
- ಅನಾವೃಷ್ಟಾದಿ ಶಾಂತಿ: ಇದನ್ನು ಸಾಮೂಹಿಕವಾಗಿ ಉತ್ಪತ್ತಿಯಾಗಿರುವ ಮಹಾಮಾರಿ, ಪಶುರೋಗಾದಿ ನಿವಾರಣೆಗೆ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
- ಕೃತ್ಯಾದ್ರೋಹ ಶಾಂತಿ: ವಿರೋಧಿಗಳ ಯಾವುದೇ ಕುಟುಂಬ, ಉದ್ಯಮ, ಕೋಷ್ಠಗಳ ಮೇಲೆ ಮಾಡಿದ ಕೃತ್ರಿಮ ದೋಷ ನಿವಾರಣೆಗಾಗಿ ಈ ಶಾಂತಿಯನ್ನು ಮಾಡಬೇಕು.
- ದುಃಸ್ವಪ್ನ ಶಾಂತಿ: ಕೆಲವೊಂದು ಸ್ವಪ್ನಗಳು ಅಮಂಗಲತೆಯ ಮುನ್ಸೂಚನೆ ಆಗಿರುವುದರಿಂದ ಈ ದೋಷ ನಿವಾರಣೆಗಾಗಿ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
- ಪರ್ಜನ್ಯ ಶಾಂತಿ: ದೇಶದ ಅಥವಾ ಯಾವುದೇ ಪ್ರಾಂತದಲ್ಲಿ ಸಕಾಲದಲ್ಲಿ ಮಳೆ ಆಗದಿದ್ದಲ್ಲಿ ಜೀವಿಗಳಿಗೆ ಅತಿ ಆತಂಕ ಆಗುವುದು. ಆ ಪರಿಸ್ಥಿತಿ ನಿವಾರಣೆಗೆ ಪ್ರಕೃತಿ ದೇವಿಯನ್ನು ಶಾಂತಿಗೊಳಿಸಿ ಮಳೆ ಪಡೆಯುವುದಕ್ಕೆ ಈ ಶಾಂತಿ ಹೆಸರಿದೆ.
- ಸರ್ವ ವ್ಯಾಧಿಹರ ನಾಮತ್ರಯೀ ಶಾಂತಿ: ಜನ್ಮ ಜನ್ಮಾಂತರಗಳಿಂದ ಸಂಚಿತ ಪ್ರಾರಾಬ್ಧ ರೂಪ, ಪಾಪ, ನಿವೃತ್ತಿ ಮತ್ತು ವ್ಯಾಧಿ ಬಾಧೆ ನಿವಾರಣೆಗಾಗಿ ಮತ್ತು ಆಯುಃ ಆರೋಗ್ಯ ಪ್ರಾಪ್ತಿಗಾಗಿ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
- ನಾಳವೇಷ್ಟನ ಶಾಂತಿ: ಮಗುವಿನ ಜನನ ಸಮಯದಲ್ಲಿ ತಾಯಿಯಿಂದ ಮಗುವಿಗೆ ಆಹಾರಾದಿಗಳನ್ನು ಕೊಡುವ ನಾಳವು ಕಂಠ, ಕೈ, ಕಾಲುಗಳಿಗೆ ಸುತ್ತಿಕೊಂಡು ಜನಿಸಿದರೆ ತಂದೆ, ತಾಯಿಗೆ ಅನಿಷ್ಟ, ಸಂಪತ್ತು ನಾಶ, ಸರ್ವ ನಾಶ ಎಂದಿರುತ್ತದೆ. ಆದ್ದರಿಂದ ದೋಷ ನಿವಾರಣೆಗೆ ಈ ಶಾಂತಿಯನ್ನು ಮಾಡಬೇಕು.
- ವಿಶಾಖಾ ನಕ್ಷತ್ರ ಜನನ ಶಾಂತಿ: ವಿಶೇಷವಾಗಿ ಮಗುವು ವಿಶಾಖಾ ನಕ್ಷತ್ರದ 4ನೇ ಚರಣದಲ್ಲಿ ಜನಿಸಿದರೆ ತಂದೆ, ತಾಯಿ, ಬಂಧುಗಳಿಗೆ ವಿವಾಹದ ನಂತರ ವರನ ಸಹೋದರರಿಗೂ ಅನಿಷ್ಟ ಆದ್ದರಿಂದ ಶಾಂತಿಯ ಅಗತ್ಯವಿದೆ. 1, 2, 3 ಚರಣಗಳಿಗೆ ಅಗತ್ಯವಿಲ್ಲ.
- ಯೋನಿ ವೈಕೃತಿ ಶಾಂತಿ: ಒಂದು ಹೆಣ್ಣು ಮಗಳು ಮೊದಲನೇ ಬಾರಿಗೆ ರಜೋ ದರ್ಶನವಾಗಿ (ಮಾಸಿಕ ರಜೆ) ನಂತರ 6 ತಿಂಗಳವರೆಗೆ ರಜೋ ದರ್ಶನ ಆಗದಿದ್ದಲ್ಲಿ ಮುಂದೆ ಮದುವೆಯಾದ ಮೇಲೆ ಬರುವಂತಹ ದೋಷ ನಿವಾರಣೆಗಾಗಿ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
- ಪ್ರಪೌತ್ರ ದರ್ಶನ ಶಾಂತಿ: ಒಂದು ವೇಳೆ ನಮ್ಮ ಮಗನಿಗೆ ಮಗನು ಜನಿಸಿ, ಅವನಿಗೆ ಮಗನು ಜನಿಸಿದಾಗ ನಾವು ಪ್ರಪೌತ್ರವನ್ನು ಪಡೆದಂತೆ. ಈ ಪ್ರಪೌತ್ರ ದರ್ಶನವು ಮುತ್ತಜ್ಜನಿಗೆ ಒಳ್ಳೆಯದಲ್ಲ. ಆದ್ದರಿಂದ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
- ಕುಂಭ ವಿವಾಹ ಶಾಂತಿ: ಒಂದು ವೇಳೆ ಯುವತಿಯ ಕುಂಡಲಿಯಲ್ಲಿ ವೈಧವ್ಯ ಯೋಗವಿದ್ದಾಗ ಅಥವಾ ಎರಡು ಇಲ್ಲವೇ ಮೂರು ವಿವಾಹ ಯೋಗವಿದ್ದಲ್ಲಿ ದೋಷ ನಿವಾರಣೆಗೆ ಈ ಶಾಂತಿಯನ್ನು ಮಾಡಿಸುವುದು ಉತ್ತಮ.
- ಕದಳಿ ವಿವಾಹ ಶಾಂತಿ: ಈ ವಿಧಿಯನ್ನು ಸಹ ಮೇಲೆ ಕಾಣಿಸಿದ ದೋಷ ನಿವಾರಣೆಗೆ ಮಾಡಿಸಲಾಗುತ್ತದೆ.
- ಅರ್ಕ ವಿವಾಹ ಶಾಂತಿ: ಒಂದು ವೇಳೆ ಯುವಕನ ಜಾತಕದಲ್ಲಿ ಮೊದಲನೇಯ ವಿವಾಹವಾಗಿ ಆತನ ಪತ್ನಿಯು ಪತಿಯನ್ನು ತ್ಯಜಿಸಿದಾಗ ಇಲ್ಲವೇ ಮರಣ ಹೊಂದಿದಾಗ ಅದೇ ರೀತಿ ಎರಡನೇಯ ವಿವಾಹವು ಇದೇ ರೀತಿಯಾದಲ್ಲಿ ಮೂರನೇಯ ವಿವಾಹವಾಗುವ ಮುನ್ನ ಈ ಶಾಂತಿಯನ್ನು ಮಾಡಿಸಿಕೊಂಡು ವಿವಾಹವಾಗಬೇಕು.
ಹೀಗೆ ಅನೇಕ ವಿಧವಾದ ಶಾಂತಿ, ಹೋಮ,ಯಜ್ಞಾದಿಗಳು ಇರುತ್ತಿದ್ದು ಅವುಗಳನ್ನು ಮಾಡಿಸಲು ಜ್ಯೋತಿಷಿಗಳ ಅಥವಾ ಪುರೋಹಿತರ ಸಲಹೆ ಅಗತ್ಯ.