ಶೀ ಕ್ಷೇತ್ರ ಭೀಮೇಶ್ವರ ದೇವಾಲಯ – ಶಿವಮೊಗ್ಗ

ನಿಸರ್ಗದ ಮಡಿಲಲ್ಲಿ ಶ್ರೀ ಕ್ಷೇತ್ರ ಭೀಮೇಶ್ವರ ದೇವಾಲಯ

ಶೀ ಕ್ಷೇತ್ರ ಭೀಮೇಶ್ವರ ದೇವಾಲಯ ಕರ್ನಾಟಕದ ಅತಿ ಪುರಾತನ ದೇಗುಲಗಳಲ್ಲೊಂದು. ಸುಂದರವಾದ ನಿಸರ್ಗದ ನಡುವೆ ಕಲ್ಲುಬಂಡೆಗಳಿಂದಲೇ ನಿರ್ಮಿತವಾದಂತಿರೋ ದೇವಾಲಯದಲ್ಲಿ ಕಂಗೊಳಿಸುತ್ತಿರೋ ಶಿವಲಿಂಗ, ಎದುರುಗಡೆ ಕಲ್ಲಿನ ಮಂಟಪದಲ್ಲಿ ಕುಳಿತಿರೋ ಕಲ್ಲಿನ ಬಸವ, ದೇವಾಲಯ ಪಕ್ಕದಲ್ಲಿ ಕಲ್ಲುಬಂಡೆಗಳಿಂದ ಧುಮ್ಮಿಕ್ಕಿ ಅದ್ಭುತ ಜಲಪಾತವನ್ನು ಸೃಷ್ಟಿಸಿರೋ ಸರಳಾ ನದಿ. ಇಂತಹ ಒಂದು ಸೃಷ್ಟಿಯ ಸುಂದರವಾದ ಪ್ರವಾಸಿ ಸ್ಥಳವೇ ಶ್ರೀ ಭೀಮೇಶ್ವರ.

ಶೀ ಕ್ಷೇತ್ರ ಭೀಮೇಶ್ವರ ಜಲಪಾತ ಶಿವಮೊಗ್ಗ 7

ಭೀಮೇಶ್ವರ ದೇವಾಲಯವನ್ನು ದ್ವಾಪರಯುಗದ ಮಹಾಭಾರತದ ಭೀಮ ನಿರ್ಮಿಸಿದನೆಂಬ ಪ್ರತೀತಿ ಇದೆ. ಅಜ್ಞಾತವಾಸದ ಕಾಲದಲ್ಲಿ ಧರ್ಮರಾಯನ ಅಪ್ಪಣೆಯಂತೆ ಶಿವರಾತ್ರಿಯ ದಿನ ಭೀಮನು ಶಿವನ ಲಿಂಗವನ್ನು ತಂದು ಈ ಪ್ರದೇಶದಲ್ಲಿ ಸ್ಥಾಪಿಸಿ ಕಲ್ಲಿನ ಮಂಟಪವನ್ನು ನಿರ್ಮಾಣ ಮಾಡಿದ್ದನು. ಭೀಮನು ಶಿವಲಿಂಗವನ್ನ ಸ್ಥಾಪಿಸಿದ್ದರಿಂದ ಈ ಸ್ಥಳಕ್ಕೆ ಭೀಮೇಶ್ವರ ಅನ್ನೋ ಹೆಸರು ಬಂತು. ಈ ಪ್ರದೇಶ ಕಲ್ಲುಬಂಡೆಗಳಿಂದಲೇ ಆವೃತ್ತವಾಗಿದ್ದರಿಂದ ನೀರಿನ ಸೆಲೆಯೇ ಇರಲಿಲ್ಲ. ಶಿವಲಿಂಗಕ್ಕೆ ಅಭಿಷೇಕ ಮಾಡಲು ನೀರಿನ ಅವಶ್ಯಕತೆ ಎದುರಾಯಿತು. ಆಗ ಅರ್ಜುನನು ಕಲ್ಲು ಬಂಡೆಗೆ ತನ್ನ ಬಾಣ ಪ್ರಯೋಗ ಮಾಡಿದಾಗ ಸರಳೆಯು ನದಿಯ ರೂಪದಲ್ಲಿ ಹರಿಯಲಾರಂಭಿಸಿದಳು ಅನ್ನೋ ಪ್ರತೀತಿ ಇದೆ. ಅಂದಿನಿಂದ ಇಂದಿನವರೆಗೆ ಸರಳಾ ನದಿಯ ನೀರು ಬತ್ತದೇ ಇರೋದು ವಿಶೇಷ.

ಈ ಭೀಮೇಶ್ವರ ಕ್ಷೇತ್ರವು ಸಾಗರ ಹಾಗೂ ಭಟ್ಕಳದ ಗಡಿ ಪ್ರದೇಶದಲ್ಲಿದ್ದು, ಸಾಗರ, ಭಟ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿದೆ. ಭೀಮೇಶ್ವರ ಕ್ರಾಸ್ ನಿಂದ ಸುಮಾರು 2 ಕಿಲೋಮೀಟರ್ ಕಡಿದಾದ ರಸ್ತೆಯಲ್ಲಿ ಸಾಗಿದಾಗ ಶ್ರೀ ಕ್ಷೇತ್ರ ಭೀಮೇಶ್ವರ ದರ್ಶನವಾಗುತ್ತದೆ.

ಆಚರಣೆಗಳು

ಪ್ರತಿದಿನವೂ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಪ್ರತಿವರ್ಷ ಶಿವರಾತ್ರಿಯಂದು ಇಲ್ಲಿ ಜಾತ್ರೆ ನಡೆಯುತ್ತದೆ. ಪ್ರತಿ ಹುಣ್ಣಿಮೆ ಮತ್ತು ಅಮವ್ಯಾಸೆಯಂದು ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.

ಸಾರಿಗೆ ವ್ಯವಸ್ಥೆ ಮತ್ತು ಮಾರ್ಗ

ಸಾಗರದಿಂದ ಭಟ್ಕಳಕ್ಕೆ, ಕೋಗಾರು ಮಾರ್ಗದಲ್ಲಿ ಹೋಗುವ ಎಲ್ಲ ಬಸ್ಗಳಿಗೂ ಭೀಮೇಶ್ವರ ಕ್ರಾಸ್ ನಲ್ಲಿ ನಿಲುಗಡೆ ಇದೆ ಅಲ್ಲಿಂದ ೨ ಕಿಲೋಮೀಟರ್ ನಡೆದು ಕೊಂಡು ಹೋಗಬೇಕು. ಸ್ವಂತ ವಾಹನವಾದರೆ ದೇವಸ್ಥಾನದ ಹತ್ತಿರದವರೆಗು ಹೋಗಬಹುದು. ಆದರೆ ರಸ್ತೆ ದುರ್ಗಮವಾಗಿದ್ದು ಜಾಗೃತೆ ಅವಶ್ಯಕವಾಗಿದೆ.

ಮಾರ್ಗ:
  • ಸಾಗರ-ತಾಳಗುಪ್ಪ-ಕಾರ್ಗಲ್-ಕೋಗಾರು-ಭೀಮೇಶ್ವರ.(೬೭(67) ಕಿ.ಮೀ)
  • ಭಟ್ಕಳ-ಸಿದ್ದಾಪುರ-ಸೊರಬ ಮಾರ್ಗವಾಗಿ (೧೨೨(122) ಕಿ.ಮೀ)
  • ಮಂಗಳೂರಿನಿಂದ ಭೀಮೇಶ್ವರಕ್ಕೆ (೧೭(17)೬ಕಿ.ಮೀ)
  • ಜೋಗದಿಂದ ಭೀಮೇಶ್ವರಕ್ಕೆ (೪೪(44) ಕಿ.ಮೀ.)

Leave a Reply Cancel Reply

Exit mobile version