ಮತ್ಸ್ಯ ಜಯಂತಿಯ ಮಹತ್ವ

ಮತ್ಸ್ಯ ಜಯಂತಿ ಆಚರಣೆ ದಿನ : ಶುಕ್ರವಾರ, 24 ಮಾರ್ಚ್ 2023

ಚೈತ್ರ ಮಾಸದ ಮೂರನೇ ದಿನ ಅಂದರೆ ಶುಕ್ಲ ಪಕ್ಷದ ತದಿಗೆ ತಿಥಿಯಂದು ಮತ್ಸ್ಯ ಜಯಂತಿ ಆಚರಿಸಲಾಗುತ್ತದೆ. ಪರಮಾತ್ಮ ವಿಷ್ಣುವು ಹಯಗ್ರೀವಾಸುರ ಅಸುರನನ್ನು ಸಂಹರಿಸಿ ವೇದಗಳನ್ನು ಪುನಃ ಸ್ಥಾಪಿಸುವುದಕ್ಕಾಗಿ ಮೀನಿನ ರೂಪದಲ್ಲಿ ಅವತರಿಸಿದ ದಿನ.

ಮತ್ಸ್ಯ ಜಯಂತಿ ಮಹತ್ವ

ಮತ್ಸ್ಯಾವತಾರ ಚಿಂತನೆ:

ಪರಮಾತ್ಮನ ಅನಂತ ಅವತಾರಗಳಲ್ಲಿ ಮತ್ಸ್ಯಾವತಾರ ಕೂಡ ಒಂದು. ದಶಾವತಾರಗಳಲ್ಲಿ ಮತ್ಸ್ಯಾವತಾರ ಮೊದಲನೇ ಅವತಾರ. ವೈವಸ್ವತಮನುವನ್ನು ಪ್ರಳಯದಿಂದ ಕಾಪಾಡಿದ ಅವತಾರ ಎಂದು ಹೇಳಬಹುದು. ಎರಡು ಸಂದರ್ಭದಲ್ಲಿ ಈ ಮತ್ಸ್ಯಾವತಾರ ನಮಗೆ ತಿಳಿಯುತ್ತದೆ. ವೈವಸ್ವತ ಮನ್ವಂತರ ಮತ್ತು ಚಾಕ್ಷುಷ ಮನ್ವಂತರದಲ್ಲಿ ಈ ಕಥೆಗಳು ಬರುತ್ತವೆ.

ಮೊದಲು ಈ ಕಥೆ ನಡೆದಿದ್ದು ಚಾಕ್ಷುಷ ಮನ್ವಂತರದಲ್ಲಿ, ಒಮ್ಮೆ ಬ್ರಹ್ಮದೇವರು ಪ್ರಳಯ ಕಾಲದಲ್ಲಿ ನಿದ್ರಾವಸ್ಥೆಯಲ್ಲಿರುವಾಗ ಹಯಗ್ರೀವಾಸುರ ಎಂಬ ಅಸುರನು, ಬ್ರಹ್ಮದೇವರಲ್ಲಿದ್ದ ವೇದಗಳನ್ನು ಅಪಹರಿಸಿಕೊಂಡು ಹೋಗುವಾಗ ಪರಮಾತ್ಮನು ಮೀನಿನ ರೂಪದಲ್ಲಿ ಪ್ರಕಟಗೊಂಡು ಹಯಗ್ರೀವಾಸುರನ ಸಂಹರಿಸಿ ಪುನಃ ವೇದಗಳನ್ನು ಬ್ರಹ್ಮದೇವರಿಗೆ ಕೊಟ್ಟನು. ಬ್ರಹ್ಮದೇವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಪುರಾಣವೇ ಮುಂದೆ “ಮತ್ಸ್ಯಪುರಾಣ” ಎಂದು ಪ್ರಸಿದ್ಧವಾಯಿತು.

ವೈವಸ್ವತ ಮನ್ವಂತರದಲ್ಲಿ ಬರುವ ಕಥೆಯ ಪ್ರಕಾರ ಸೂರ್ಯನ ಮಗನಾದ ಸತ್ಯವ್ರತ ರಾಜ(ಇವನೇ ಮುಂದೆ ವೈವಸ್ವತ ಮನು ಎಂದು ಕರೆಯುತ್ತಾರೆ) ಕೃತಮಾಲ ನದಿಯ ಬಳಿಯಲ್ಲಿ ನಿರಾಹಾರಿಯಾಗಿ ತಪಸ್ಸು ಮಾಡಲು, ಸಂಜೆಯ ಅರ್ಘ್ಯಪ್ರದಾನ ಸಮಯದಲ್ಲಿ ನದಿಯಲ್ಲಿ ಅರ್ಘ್ಯ ಬಿಡುವ ಸಂದರ್ಭದಲ್ಲಿ, ಒಂದು ಸಣ್ಣ ಮೀನು ಬಂದು ಸತ್ಯವ್ರತನ ಕೈ ಬೊಗಸೆಯಲ್ಲಿ ಬಂದು ಸೇರಿತು. ಅದನ್ನು ಮತ್ತೆ ನದಿಗೆ ಚೆಲ್ಲಲು ಹೋದಾಗ ಭಯಭೀತವಾದ ಧ್ವನಿಯಲ್ಲಿ ಅದು ತನ್ನನ್ನು ನದಿಯಲ್ಲಿರುವ ಕ್ರೂರ ಮೀನು ಮೊಸಳೆಗಳಿಂದ ರಕ್ಷಿಸುವಂತೆ ಮಾತನಾಡುತ್ತದೆ. ಅದು ಮಾತನಾಡಿದ್ದು ಕಂಡು ಚಕಿತನಾದ ರಾಜ ಅದನ್ನು ತನ್ನ ಕಮಂಡಲಿನಲ್ಲಿ ಹಾಕಿ ಮನೆಗೆ ತಂದ. ಅಷ್ಟರಲ್ಲಾಗಲೇ ಅದು ಕಮಂಡಲಿನಷ್ಟಾಗಿತ್ತು. ನಂತರ ರಾಜ ತನ್ನ ಅರಮನೆಯಲ್ಲಿದ್ದ ಬಾವಿಗೆ ಬಿಟ್ಟನು. ಮೀನು ಬೆಳೆಯುತ್ತ ಬಾವಿಯು ಸಾಕಾಗಲಿಲ್ಲ. ನಂತರ ತನ್ನ ಅರಮನೆಯಲ್ಲಿದ್ದ ಕೊಳದಲ್ಲಿ ಬಿಟ್ಟನು, ಮರುದಿನ ಕೊಳದಲ್ಲೂ ಜಾಗ ಸಾಲದಾಯಿತು, ನಂತರ ಕೃತಮಾಲ ನದಿ ನಂತರ ಸಮುದ್ರಕ್ಕೆ ಬಿಟ್ಟನು. ಆಗ ರಾಜನೆದುರು ಬಂದ ಆ ಹೊಳೆಯುವ ಚಿನ್ನದ ಮೆರುಗಿನ, ಬೆನ್ನ ಮೇಲೆ ಕೊಂಬಿರುವ ಮೀನು ರಾಜನನ್ನು ಉದ್ದೇಶಿಸಿ, ‘ರಾಜನೇ, ತಾನೇ ಈ ಮತ್ಸ್ಯಾವತಾರನಾಗಿ ಅವತರಿಸಿದ್ದೇನೆ, ಇಂದಿನಿಂದ ಸರಿಯಾಗಿ ಏಳನೇ ದಿನಕ್ಕೆ ಸರಿಯಾಗಿ ಪ್ರಳಯ ಕಾಲದಂತೆ ಭೀಕರವಾದ ಮಳೆ ಬಂದು ಜಗತ್ತನ್ನು ಮುಳುಗಿಸಲಿದೆ. ನೀನು ದೊಡ್ಡದೊಂದು ಹಡಗನ್ನು ಕಟ್ಟಿ ಅದರೊಳಗೆ ನಿನ್ನ ಪ್ರಜೆಗಳನ್ನು ಎಲ್ಲ ಪ್ರಭೇದಗಳ ಪಶುಪಕ್ಷಿಗಳನ್ನು ಸಸ್ಯಗಳನ್ನು ಬೀಜಗಳನ್ನು ತುಂಬಿ ಸಿದ್ಧನಾಗಿರು. ಆಗ ಆ ಜಲದಲ್ಲಿ ನಾನು ಕಾಣಿಸಿಕೊಳ್ಳುತ್ತೇನೆ. ನನ್ನ ಕೊಂಬಿಗೆ ವಾಸುಕಿಯನ್ನು ಕಟ್ಟು. ಆ ಮಹಾಮಳೆಯಿಂದ ತುಂಬಿದ ಸಾಗರದ ಪ್ರವಾಹದಿಂದ ನಿನ್ನ ಹಡಗನ್ನು ನಾನು ಸುರಕ್ಷಿತವಾಗಿ ದಡ ತಲುಪಿಸುತ್ತೇನೆ’ ಅಂತ ಹೇಳಿ ಅಂತರ್ಧಾನವಾಯಿತು.

ಈ ಮೊದಲು ಮನುವುಗೆ ಅದು ಹೇಳಿದಂತೆಯೇ ಮಳೆ ಸುರಿದು ಇಳೆ ತುಂಬಿತು. ಅಭಯವಿತ್ತಂತೆ ಬಂದ ಮೀನಿನ ಕೊಂಬಿಗೆ ವಾಸುಕಿಯನ್ನು ಕಟ್ಟಿದ ರಾಜ. ಪ್ರಕ್ಷುಬ್ಧ ಸಾಗರದಲ್ಲಿ ಹಡಗನ್ನು ತೇಲಿಸಿಕೊಂಡು ಸುತ್ತಾಡಿತು. ಆ ಸಮಯದಲ್ಲಿ ಮನುವಿಗೆ ವೇದಗಳನ್ನು ಬೋಧಿಸಿತು. ಕೊನೆಗೆ ಮನುವಿನ ಹಡಗನ್ನು ಹಿಮವತ್‌ ಪ್ರಾಂತ್ಯದಲ್ಲಿ ಸುರಕ್ಷಿತವಾಗಿ ತಲುಪಿಸಿ ಮಾಯವಾಯಿತು. ಮತ್ಸ್ಯರೂಪೀ ಭಗವಂತ ವೈವಸ್ವತ ಮನುವಿಗೆ ಉಪದೇಶಿಸಿದ ಪುರಾಣವೇ ಮುಂದೆ “ಮತ್ಸ್ಯಪುರಾಣ” ಎಂದು ಪ್ರಸಿದ್ಧವಾಯಿತು. ವೇದವ್ಯಾಸರು ತಮ್ಮಅಷ್ಟಾದಶ ಪುರಾಣಗಳಲ್ಲಿ ಈ ಮತ್ಸ್ಯಪುರಾಣ ರಚಿಸಿದರು.

ಭಾಗವತದ ಅಷ್ಟಮ ಸ್ಕಂದದಲ್ಲಿ ಈ ಮತ್ಸ್ಯಾವತಾರದ ಬಗ್ಗೆ ಹಲವಾರು ಮಾಹಿತಿಗಳು ಸಿಗುತ್ತವೆ.

ಶ್ರೀಮದ್ಭಾಗವತದಲ್ಲಿ ಬರುವ ಮತ್ಸ್ಯ ಸ್ತುತಿ:

||ಮತ್ಶ್ಯೋಯುಗಾಂತಸಮಯೇ ಮನುನೋಪಲಬ್ಧ:

ಕ್ಷೋಣೀಮಯೋನಿಖಿಲಜೀವನಿಕಾಯಕೇತ: |

ವಿಸ್ರಂಸಿತಾನುರುಭಯೇಸಲಿಲೇ ಮುಖಾನ್ಮೇ

ಆದಾಯ ತತ್ರ ವಿಜಹಾರ ಹವೇದಮಾರ್ಗಾನ್ ||

ಮಹಾಭಾರತ ತಾತ್ಪರ್ಯನಿರ್ಣಯದಲ್ಲಿ ಬರುವ ಮತ್ಸ್ಯ ಸ್ತುತಿ:

||ಅಥೋ ವಿಧಾತುರ್ಮುಖತೋ ವಿನಿಸ್ಸೃತಾನ್

ವೇದಾನ್ಹಯಾಸ್ಯೋ ಜಗೃಹೇ ಸುರೇಂದ್ರ: |

ನಿಹತ್ಯತಂ ಮತ್ಸ್ಯವಪುರ್ಜುಗೋಪ ಮನುಂ ಮುನೀಂಸ್ತಾಂಶ್ಚ ದದೌವಿಧಾತು: |

ಮನ್ವಂತರಪ್ರಲಯೇಮತ್ಸ್ಯರೂಪೋವಿದ್ಯಾಮದಾನ್ಮನವೇದೇವದೇವ: |

ವೈವಸ್ವತಾಯೋತ್ತಮಸಂವಿದಾತ್ಮಾವಿಷ್ಣೋ: ಸ್ವರೂಪಪ್ರತಿಪತ್ತಿರೂಪಾಮ್ ||

ಇನ್ನು ನಾರಾಯಣ ವರ್ಮದಲ್ಲಿ ಬಂದಿರುವ ಮತ್ಸ್ಯ ಸ್ತುತಿ:

||ಜಲೇಷು ಮಾಂರಕ್ಷತು ಮತ್ಸ್ಯಮೂರ್ತಿ:

ಯಾದೋಗಣೇಭ್ಯೋವರುಣಸ್ಯ ಪಾಶಾತ್||

ನಾರಾಯಣವರ್ಮದಲ್ಲಿ ಬರುವ 13 ನೇ ಶ್ಲೋಕದಲ್ಲಿಬರುವ ಅರ್ಥವನ್ನು ನೋಡೋಣ
ಮಾಂ ನನ್ನನ್ನು, ಜಲೇಷು – ಜಲಾಶಯಗಳಲ್ಲಿರುವಾಗ, ಯಾದೋಗಣೇಭ್ಯ: – ಜಲಚರ ಪ್ರಾಣಿಗಳಿಂದ, ವರುಣಸ್ಯ ಪಾಶಾತ್ – ವರುಣದೇವರಪಾಶಗಳಿಂದ ಮತ್ಸ್ಯಮೂರ್ತಿ: ಮೀನಿನ ರೂಪಧಾರಿಯಾದ ವಿಷ್ಣುವುಪರಮಾತ್ಮ ರಕ್ಷತು – ಎನ್ನ ರಕ್ಷಿಸಲಿ. (ಸುವಿದ್ಯೇ೦ದ್ರತೀರ್ಥರ ಪ್ರವಚನ ಆಧಾರಿತ)

ವಾದಿರಾಜ ಭಗವದ್ಚರಣರ ದಶಾವತಾರ ಸ್ತುತಿಯಲ್ಲಿ ಬರುವ ಮತ್ಸ್ಯಾವತಾರ ಚಿಂತನೆ

||ಪ್ರೋಷ್ಠಿಷವಿಗ್ರಹ ಸುನಿಷ್ಠಿವನೋದ್ಧತ ವಿಶಿಷ್ಟಾ೦ಬುಚಾರಿಜಲಧೇ|

ಕೋಷ್ಠಾ೦ತರಾಹಿತವಿಚೇಷ್ಟಾಗಮೌಘ ಪರಮೇಷ್ಠಿಡಿತತ್ವಮಮ ಮಾಂ|

ಪ್ರೆಷ್ಠಾರ್ಕಸೂನುಮನುಚೇಷ್ಟಾರ್ಥಮಾತ್ಮವಿದತೀಷ್ಟೋಯುಗಾಂತ ಸಮಯೇ|

ಸ್ಥೆಷ್ಠಾತ್ಮಶೃಂಗಧೃತಕಾಷ್ಠಾ೦ಬುವಾಹನ ವರಾಷ್ಟಾಪದಪ್ರಭತನೋ||

ಇದರ ವಿವರಣೆ ತಿಳಿಯೋಣ
ಪ್ರೋಷ್ಠಿಷವಿಗ್ರಹ – ಶ್ರೇಷ್ಠವಾದ ಮತ್ಸ್ಯದ ದೇಹದಂತಹ ದೇಹವುಳ್ಳ, ಸುನಿಷ್ಠಿವನೋದ್ಧತ – ಧೂತ್ಕಾರದಿಂದ ಆಕಾಶದೆತ್ತರಕ್ಕೆ ಹಾರುವ, ವಿಶಿಷ್ಟಾ೦ಬುಚಾರಿಜಲಧೇ – ದೊಡ್ಡ ಗಾತ್ರದತಿಮಿಂಗಲವೇ ಮುಂತಾದ ಜಲಚರಪ್ರಾಣಿಗಳಿಂದ ಕೂಡಿದಸಮುದ್ರಉಳ್ಳವನೇ, ಕೋಷ್ಠಾ೦ತರ – ಹೊಟ್ಟೆಯ ಒಳಭಾಗದಲ್ಲಿ, ಅಹಿತ – ಸ್ಥಾಪಿತವಾದ, ವಿಚೇಷ್ಟ – ವ್ಯಾಪಾರವಿಲ್ಲದ, ಆಗಮೌಘ – ವೇದಸಮೂಹ ಉಳ್ಳವನೇ, ಪರಮೇಷ್ಠಿಡಿತ – ಚತುರ್ಮುಖ ಬ್ರಹ್ಮದೇವರಿಂದ ಸ್ತುತಿಸಲ್ಪಡುವವನೇ, ಯುಗಾಂತಸಮಯೇ – ಯುಗದ ಕೊನೆಯಲ್ಲಿ, ಪ್ರೇಷ್ಠ – ಅತ್ಯಂತ ಪ್ರೀತಿಪಾತ್ರನಾದ, ಆರ್ಕಸುನುಮನು – ಸೂರ್ಯಸುತನಾದ ವೈವಸ್ವತ ಮನುವಿನ, ಚೇಷ್ಟಾರ್ಥಂ – ವ್ಯಾಪಾರಕೊಸ್ಕರ, ಸ್ಥೆಷ್ಠ – ಬಹು ಗಟ್ಟಿಯಾದ, ಆತ್ಮಶೃಂಗ – ತನ್ನ ಶೃಂಗದಿಂದ, ಧೃತ – ಧರಿಸಲ್ಪಟ್ಟ, ಕಾಷ್ಠಾ೦ಬುವಾಹನವರ – ಕಟ್ಟಿಗೆಯಿಂದ ನಿರ್ಮಿತವಾದ ಶ್ರೇಷ್ಠ ನೌಕೆ ಉಳ್ಳವನೇ, ಅಷ್ಟಾಪದಪ್ರಭತನೋ – ಬಂಗಾರದಂತೆ ಹೊಳೆಯುವ ಮೈ ಉಳ್ಳವನೇ ಆತ್ಮವಿಧಿತಿಷ್ಠ: ಪರಮಾತ್ಮನನ್ನ ಅರಿತು ಯೋಗಿಗಳಿಗೆ ಅತ್ಯಂತಪ್ರಿಯನಾದ, ತ್ವಂ – ನೀನು, ಮಾಂ – ನನ್ನನ್ನುಆವ ರಕ್ಸಿಸು.
ವಾದಿರಾಜರ ಕಾವ್ಯ ಶೈಲಿಯೆ ಅಮೋಘ .

ದ್ವಾದಶ ಸ್ತೋತ್ರದಲ್ಲಿ ಮತ್ಸ್ಯರೂಪಿ ಪರಮಾತ್ಮನ ಚಿಂತನೆ:

||ಪ್ರಚಲಿತಲಯಜಲವಿಹರಣಶಾಶ್ವತ

ಸುಖಮಯ ಮೀನ ಹೇ ಭವಮಾಮ ಶರಣಂ||

ದ್ವಾದಶಸ್ತೋತ್ರದ ಒಂಬತ್ತನೇ ಪದ್ಯದಲ್ಲಿ ಬರುವ ಐದನೇ ಸಾಲಿನಲ್ಲಿಶ್ರೀ ಜಗದ್ಗುರು ಶ್ರೀ ಆನಂದ ತೀರ್ಥರುಹೇಳುವ ಹಾಗೆ ಉಕ್ಕಿ ಹರಿಯುವ ಪ್ರಳಯ ಸಮುದ್ರದಲ್ಲಿಕ್ರೀಡಿಸುವವನೇ, ನಮ್ಮ ಸಂಸಾರವೆಂಬ ಸಾಗರದಲ್ಲಿಪ್ರತಿನಿತ್ಯ ಕಷ್ಟಗಳೆಂಬ ಪ್ರಳಯದಲ್ಲಿ ನಮ್ಮೊಳಗಿದ್ದು ಕ್ರೀಡಿಸುವ ಪರಮಾತ್ಮನೇ ಅನಾದಿ ನಿತ್ಯನೇ, ಆನಂದಸ್ವರೂಪನೇ ಮತ್ಸ್ಯರೂಪಿ ಪರಮಾತ್ಮನಾದ ನಾರಾಯಣ ನೀನೆ ನನ್ನರಕ್ಷಕ ನೀನೆ ನನ್ನ ರಕ್ಷಿಸು.

ಜಗನ್ನಾಥ ದಾಸರು ತಮ್ಮ ತತ್ವಸುವ್ವಾಲಿ ಕೃತಿಯಲ್ಲಿ ಹೀಗೆ ಹೇಳುತ್ತಾರೆ

|| ವೇದತತಿಗಳನ್ನು ಕದ್ದೊಯ್ದವನ ಕೊಂದು ಪ್ರಳಯೋದಧಿ
ಯೊಳಗೆ ಚರಿಸಿದ|

ಚರಿಸಿ ವೈವಸ್ವತನಕಾಯ್ದ ಮಹಾಮಹಿಮ ದಯವಾಗೋ||

ವೇದತತಿಗಳನ್ನು – ವೇದಸಮೂಹಗಳನ್ನು (ಬ್ರಹ್ಮ ದೇವರ ಮುಖದಿಂದಹೊರಟ ವೇದಗಳನ್ನು) ಕದ್ದೊಯ್ದವನ – ಅಪಹರಿಸುವ ಹಯಗ್ರೀವಸುರನೆಂಬ ದೈತ್ಯನನ್ನು, ಕೊಂದು – ಸಂಹಾರ ಮಾಡಿ (ಮೊದಲನೇ ಮತ್ಸ್ಯಾವತಾರ ರೂಪದಿಂದ) ಪ್ರಳಯೋದಧಿಯೊಳಗೆ – ಪ್ರಳಯೋದಕದಲ್ಲಿ, ಚರಿಸಿದ – ವಿಹರಿಸಿದ, ಚರಿಸಿ ಚಕ್ಸುಶ ಮನ್ವಂತರದಪ್ರಳಯೋದಧಿಯೊಳಗೆ ಆವೀರಭೂತನಾಗಿ ಪುನಃ ಸಂಚಾರಮಾಡಿ ವೈವಸ್ವತನ – ಸೂರ್ಯಪುತ್ರನಾದ ಶ್ರಾದ್ಧದೇವನನ್ನ (ಸತ್ಯವ್ರತ) ಕಾಯ್ದ – ಕಾಪಾಡಿದ ಮಹಾಮಹಿಮ – ಅದ್ಭುತಮಹಿಮನಾದ ಹೇ ಮತ್ಶ್ಯರೂಪಿ ಪರಮಾತ್ಮ ದಯವಾಗೋ – ಎನ್ನಲ್ಲಿ ಕೃಪೆಮಾಡು.
ಹೀಗೆ ನಮ್ಮ ಗ್ರಂಥಗಳಲ್ಲಿ ಮತ್ಯ್ಸರೂಪಿಪರಮಾತ್ಮನನ್ನ ಸ್ತುತಿಸಿದ್ದಾರೆ.

ಮತ್ಶ್ಯರೂಪಿ ಪರಮಾತ್ಮನ ಆಲಯಗಳು:

  1. ಚಿತ್ತೂರುಸಮೀಪದ ಪುರಾತನ ವೇದನಾರಾಯಣ ದೇವಾಲಯ – ಕೃಷ್ಣದೇವರಾಯನ ಕಾಲದಲ್ಲಿ ನಿರ್ಮಿತವಾದ ದೇವಾಲಯ. ಇಲ್ಲಿವಿಶೇಷವಾಗಿ ಮತ್ಶ್ಯರೂಪಿ ನಾರಾಯಣ ಮತ್ತು ವೇದಗಳನ್ನುರಕ್ಷಿಸುವ ಹಾಗೆ ದೇವಾಲಯ ನಿರ್ಮಿಸಿದ್ದಾರೆ. ಇನ್ನೊಂದು ವಿಶೇಷ ಇಲ್ಲಿ ವಸಂತನವರಾತ್ರಿ ಸಂದರ್ಭದಲ್ಲಿ ಸೂರ್ಯನ ಕಿರಣಗಳು ಮೂಲವಿಗ್ರಹದ ಮೇಲೆ ಬೀಳುತ್ತದೆ.
  2. ಮತ್ಸ್ಯ ನಾರಾಯಣ ದೇವಾಲಯ – ಹೆಗ್ದಾಲ್ ಬಳ್ಳಾರಿ ಜಿಲ್ಲೆ.
    ನಮ್ಮ ಕರ್ನಾಟಕದಲ್ಲೇ ಇರುವ ದೇವಾಲಯ ಇದಾಗಿದೆಮತ್ತು ಇದು ತುಂಗಭದ್ರಾ ನದಿಯಲ್ಲಿದೊರೆತ ವಿಗ್ರಹ ಎಂಬ ನಂಬಿಕೆ ಇದೆ.

Leave a Reply Cancel Reply

Exit mobile version