0Shares

ಗದಗಿನ ವೀರನಾರಾಯಣ ದೇವಾಲಯ, ಧಾರವಾಡದಿಂದ ಪೂರ್ವಕ್ಕೆ 70 ಕಿಲೋ ಮೀಟರ್ ದೂರದಲ್ಲಿರುವ ಗದಗ ಜಿಲ್ಲಾಕೇಂದ್ರ. ಹಿಂದೆ ಕ್ರತುಪುರ, ಬೆಳವಲ ನಾಡು ಎಂದು ಕರೆಸಿಕೊಂಡಿದ್ದ ಈ ಪ್ರಾಂತ್ಯ ಕಾಲಾನಂತರದಲ್ಲಿ ಗದುಗ, ಗದಗು,ಗದಗ ಎಂಬ ಹೆಸರು ಪಡೆಯಿತು.

ವೀರನಾರಾಯಣ ದೇವಾಲಯ ಗೋಪುರ ಗದಗ

ವಿಜಯನಗರ ಅರಸರ ಕಾಲದಿಂದ ಗದುಗು ಎಂದೇ ಕ್ಯಾತವಾಗಿದ್ದ ಇಲ್ಲಿ ಹೊಯ್ಸಳರ ಅರಸು ಬಿಟ್ಟಿದೇವ ಕಟ್ಟಿಸಿದ ಶ್ರೀ ವೀರನಾರಾಯಣ ದೇವಾಲಯವಿದೆ. ರಾಮಾನುಜಾಚಾರ್ಯರಿಂದ ವೈಷ್ಣವನಾದ ಬಿಟ್ಟಿದೇವ ತನ್ನ ಗುರುಗಳ ಆಣತಿಯಂತೆ ಕಟ್ಟಿಸಿದ ಐದು ವಿಷ್ಣು ದೇವಾಲಯಗಳ ಪೈಕಿ ಇದು ಒಂದು. ವೀರನಾರಾಯಣ ದೇವಾಲಯ ಹೊಯ್ಸಳ, ಚಾಲುಕ್ಯ ಮತ್ತು ವಿಜಯನಗರದರಸರ ಕಾಲದ ವಾಸ್ತುಶೈಲಿಯನ್ನು ಒಳಗೊಂಡಿದೆ. ಪ್ರವೇಶದ್ವಾರ ವಿಜಯನಗರ ಶೈಲಿಯಲ್ಲಿದ್ದರೆ, ಗರ್ಭಗೃಹ ಹಾಗೂ ಮೇಲ್ಗೋಪುರ ಚಾಲುಕ್ಯರ ಶೈಲಿಯಲ್ಲಿದೆ. ದೇವಾಲಯದ ಮುಂದಿರುವ ಗರುಡಗಂಬ ಹಾಗೂ ರಂಗಮಂಟಪಗಳು ಹೊಯ್ಸಳ ಶೈಲಿಯಲ್ಲಿವೆ.

ವೀರನಾರಾಯಣ ಗದಗ
ಪೂರ್ವಾಭಿಮುಖವಾಗಿರುವ ದೇವಾಲಯ ಪ್ರವೇಶಿಸಿದರೆ ಒಳಗಿರುವ ಸುಂದರ ದೇವಾಲಯಗಳ ಆಧಾರ ಸ್ತಂಭಗಳ ಸೂಕ್ಷ್ಮ ಕೆತ್ತನೆ ಮನಸೆಳೆಯುತ್ತದೆ. ಗದುಗಿನ ನಾರಣಪ್ಪ (ಕುಮಾರವ್ಯಾಸ) ಈ ದೇವಾಲಯದಲ್ಲಿ ಕುಳಿತು ಗದುಗಿನ ಭಾರತ ಬರೆದನೆಂದೂ ಹೇಳುತ್ತಾರೆ. ದೇವಾಲಯದ ಕೆಲವು ಕಲ್ಲುಗಳಲ್ಲಿ ಓಲೆಗರಿಯ ಮೇಲೆ ಬರೆಯಲು ಬಳಸುತ್ತಿದ್ದ ಲೋಹದ ಲೇಖನಿಯನ್ನು ಹರಿತ ಮಾಡಿದ ಕುರುಹುಗಳೂ ಇವೆ.

0Shares

ನಿಮ್ಮದೊಂದು ಉತ್ತರ