Category Archives: ಕೋಟೆ

ಈ ವರ್ಗದಲ್ಲಿ ನೀವು ಕೋಟೆಗೆ ಸಂಬಂಧಿಸಿರುವ ಎಲ್ಲಾ ಪೋಸ್ಟ್ ಅನ್ನು ಕನ್ನಡ ಭಾಷೆಯಲ್ಲಿ ಪಡೆಯುತ್ತೀರಿ.

ಮಳಖೇಡ ಕೋಟೆ – ಗುಲ್ಬರ್ಗ

ಮಳಖೇಡ ಕೋಟೆಯು ಗುಲ್ಬರ್ಗ ಜಿಲ್ಲೆಯ ಸೇಡಂ ತಾಲ್ಲೂಕಿನಲ್ಲಿದೆ. ೮-೧೦ ನೆಯ ಶತಮಾನದವರೆಗೆ ರಾಷ್ಟ್ರಕೂಟರ ರಾಜಧಾನಿಯಾಗಿ ಮೆರೆದ ಮಳಖೇಡದಲ್ಲಿ ಇಂದಿಗೆ ಆ ಕಾಲದ ಕೆಲವು ಅವಶೇಷಗಳು ಮಾತ್ರ ಕಂಡುಬರುತ್ತದೆ. ಆದರೆ ಈಗಿರುವ ಕೋಟೆಯು ೧೭ ನೆಯ ಶತಮಾನದಲ್ಲಿ ರಚನೆಗೊಂಡಿದೆ.

ಕಾಗಿನಾ ನದಿಯ ದಂಡೆಯ ಮೇಲಿರುವ ಮಳಖೇಡದ ಕೋಟೆ ೩ ಸುತ್ತಿನ ಕೋಟೆಯಾಗಿದ್ದು ಹೊರಕೋಟೆಯು ಒಳಕೋಟೆಯನ್ನು ಸಂಪೂರ್ಣವಾಗಿ ಸುತ್ತುವರೆದಿಲ್ಲ. ಕಾಗಿನಾ ನದಿಯೇ ಪ್ರಾಕೃತಿಕವಾಗಿ ಕೋಟೆಯ ದಕ್ಷಿಣದಿಂದ ಪಶ್ಚಿಮವಾಗಿ ಹರಿಯುವುದರಿಂದ ಆ ಜಾಗದಲ್ಲಿ ಮತ್ತೆ ಕಂದಕದ ಅವಶ್ಯಕತೆಯಿಲ್ಲ. ಉತ್ತರದಿಂದ ಪೂರ್ವಕ್ಕೆ ಮಾತ್ರ ಕಂದಕವನ್ನು ನಿರ್ಮಿಸಲಾಗಿದೆ. ಹೊರಕೋಟೆಯನ್ನು ದಪ್ಪನಾದ ಕಲ್ಲುಗಳನ್ನು ಆಯತಾಕಾರವಾಗಿ ಕತ್ತರಿಸಿ ನಿರ್ಮಿಸಲಾಗಿದೆ. ಇದಕ್ಕೆ ಪ್ರಮುಖ ದ್ವಾರವಾಗಿ ಪೂರ್ವ ಮತ್ತು ಈಶಾನ್ಯಕ್ಕೆ ದ್ವಾರಗಳಿವೆ. ಪೂರ್ವದಿಕ್ಕಿನ ಬಾಗಿಲು ಇಂದಿಗೆ ಬಿದ್ದು ಹಾಳಾಗಿದೆ. ಇದಕ್ಕೆ ಉತ್ತರದಲ್ಲಿ ಅರ್ಧವೃತ್ತಾಕಾರದ ದೊಡ್ಡ ಕೊತ್ತಳವಿದೆ. ದಕ್ಷಿಣಕ್ಕೆ ಒಂದರ ನಂತರ ಇನ್ನೊಂದು ಎರಡು ಗೋಡೆಯನ್ನು ನಿರ್ಮಿಸಿಲಾಗಿದೆ. ಹೊರಕೋಟೆಯಲ್ಲಿ ಅರ್ಧವೃತ್ತಾಕಾರ ಹಾಗೂ ಚೌಕಾಕಾರದ ಎರಡೂ ರೀತಿಯ ಕೊತ್ತಳಗಳಿವೆ.

ಒಳಕೋಟೆಯನ್ನು ಚಿಕ್ಕ ಚಿಕ್ಕ ಕಲ್ಲುಗಳನ್ನು ಕತ್ತರಿಸಿ ನಯಮಾಡಿ ಕಟ್ಟಲಾಗಿದೆ. ಸುಮಾರು ೬ ಮೀ. ಎತ್ತರವಿರುವ ಈ ಕೋಟೆ ಗೋಡೆಯು ಇಂದಿಗೆ ಅಲ್ಲಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ಈ ಕೋಟೆಯ ಮಹಾದ್ವಾರವು ಪೂರ್ವ ದಿಕ್ಕಿನಲ್ಲಿದೆ. ಕೋಟೆಯಲ್ಲಿ ಅರ್ಧ ವೃತ್ತಾಕಾರದ ಹಾಗೂ ಚೌಕಾಕಾರದ ಬುರುಜುಗಳಿವೆ. ಇವುಗಳಲ್ಲಿ ಅತ್ಯಂತ ವಿಶಿಷ್ಟವಾದ ಕರ್ನಾಟಕದ ಯಾವ ಕೋಟೆಯಲ್ಲೂ ಇರದ ಒಂದು ರೀತಿಯ ಬುರುಜಿದೆ. ಅದೆಂದರೆ ಪಶ್ಚಿಮ ದಿಕ್ಕಿನಲ್ಲಿ ಕೆಳಗಿನ ಭಾಗದಲ್ಲಿ ಚೌಕಾಕಾರವಾಗಿದ್ದು ಮೇಲೆ ಮೇಲೆ ಬರುತ್ತ ಅದು ಅರ್ಧವೃತ್ತಾಕಾರವಾಗಿ ರೂಪುಗೊಂಡಿದೆ. ಕೋಟೆಯ ಮೇಲ್ಭಾಗದಲ್ಲಿ ಗಾರೆಯಿಂದ ಮಾಡಿದ ಬಂದೂಕು ಕಿಂಡಿಗಳಿವೆ.

ಇದರ ಮಹಾದ್ವಾರದ ಒಳಗೆ ೩ ಬಾಗಿಲುಗಳಿವೆ. ಮೊದಲನೆಯ ಮುಖ್ಯದ್ವಾರವು ಉತ್ತರಾಭಿಮುಖವಾಗಿದೆ. ಈ ಬಾಗಿಲು ಎರಡು ವೃತ್ತಾಕಾರದ ಕೊತ್ತಳಗಳ ನಡುವೆ ನಿರ್ಮಾಣ ಗೊಂಡಿದೆ. ಮುಖ್ಯ ಬಾಗಿಲು ಕಮಾನಿನ ಆಕಾರದಲ್ಲಿದ್ದು ಪಕ್ಕದಲ್ಲಿ ಒಂದು ಚಿಕ್ಕ ಬಾಗಿಲಿದೆ. ಈ ಆವರಣವನ್ನು ದಾಟಿ ಮುನ್ನಡೆದರೆ ಪಶ್ಚಿಮಕ್ಕೆ ಎರಡನೆಯ ಬಾಗಿಲು ಸಿಗುತ್ತದೆ. ಇದೂ ಸಹ ಕಮಾನಿನ ಆಕಾರದಲ್ಲಿದೆ. ಬಾಗಿಲಿನ ಉತ್ತರ ಭಾಗಕ್ಕೆ ಅಷ್ಟಭುಜಾಕೃತಿಯ ಕೊತ್ತಳವಿದೆ. ದಕ್ಷಿಣಕ್ಕೆ ಕೋಟೆ ಗೋಡೆಯಿದೆ. ಇಲ್ಲಿಯೇ ಒಳಭಾಗದಲ್ಲಿ ಕೋಟೆಯನ್ನು ಹತ್ತಲು ಮೆಟ್ಟಿಲುಗಳಿವೆ.

ಕವಲೇದುರ್ಗ – ತೀರ್ಥಹಳ್ಳಿ

ಕವಲೇದುರ್ಗ ತೀರ್ಥಹಳ್ಳಿ ತಾಲ್ಲೂಕಿನ ಹಸಿರು ಸಿರಿಯಿಂದ ಸಮೃದ್ಧವಾದ ಮೋಹಕ ತಾಣ. ತೀರ್ಥಹಳ್ಳಿಯಿಂದ ೧೮ ಕಿ.ಮೀ ಹಾಗೂ ಶಿವಮೊಗ್ಗದಿಂದ ಸುಮಾರು ೮೦ ಕಿ.ಮೀ ದೂರದಲ್ಲಿದೆ. ತೀರ್ಥಹಳ್ಳಿ – ಸಾಲೂರು ಮಾರ್ಗವಾಗಿ ದಟ್ಟ ಕಾಡುಗಳಿಂದ ಕೂಡಿದ ಸಹ್ಯಾದ್ರಿ ಶ್ರೇಣಿಯ ಮಡಿಲಲ್ಲಿ ಸಾಗಿದಾಗ ಈ ದುರ್ಗ ಎದುರಾಗುತ್ತದೆ. ಇದೊಂದು ಪೌರಾಣಿಕ ಮತ್ತು ಐತಿಹಾಸಿಕ ಮಹತ್ವದ ನೈಸರ್ಗಿಕ ಸುಂದರ ತಾಣ. ಇಲ್ಲಿ ೯ನೇ ಶತಮಾನದ ಕೋಟೆ ಇದೆ.

ಕವಲೇದುರ್ಗ ಇತಿಹಾಸ:

ಕರ್ನಾಟಕದ ಇತಿಹಾಸದಲ್ಲಿ ನಾಗರಖಂಡ ಬನವಾಸಿ ನಾಡೆಂದು ಖ್ಯಾತಿಗೊಂಡಿದ್ದ ಮಲೆನಾಡು ಪ್ರದೇಶದ ಕವಲೇದುರ್ಗ ಒಂದು ಐತಿಹಾಸಿಕ ತಾಣ. ಮಲ್ಲವ ಅರಸರ ಆಳ್ವಿಕೆಗೆ ಒಳಪಟ್ಟಿದ್ದ ಕವಲೇದುರ್ಗ, ಭುವನಗಿರಿ ದುರ್ಗ ಸಂಸ್ಥಾನವಾಗಿ ಮಾರ್ಪಟ್ಟ ಹಿನ್ನಲೆಯ ಹಿಂದೆ ಯುದ್ಧ ನಡೆದಿದೆ. ಮಲ್ಲವರು ಮೊದಲು ಸಾಗರದ ಸಮೀಪ ಇರುವ ಕೆಳದಿ ಎಂಬಲ್ಲಿ ರಾಜ್ಯ ಸ್ಥಾಪಿಸಿ ಇಕ್ಕೇರಿ, ಬಿದನೂರಿನಲ್ಲಿ(ನಗರ) ಕೋಟೆಕೊತ್ತಲ ನಿರ್ಮಿಸಿ ರಾಜ್ಯಭಾರ ಮಾಡುತ್ತಿದ್ದರು. ಆಗ ಕವಲೇದುರ್ಗದ ಗಿರಿಪ್ರದೇಶ ತೊಲೆತಮ್ಮ ಮತ್ತು ಮುಂಡಿಗೆತಮ್ಮ ಎಂಬ ಪಾಳೆಗಾರ ಸಹೋದರರ ಸ್ವಾಧೀನದಲ್ಲಿತ್ತು. ಈ ಸಹೋದರರನ್ನು ಸೋಲಿಸಿದ ಮಲ್ಲವರು ಕವಲೇದುರ್ಗ ಕೋಟೆಯನ್ನು ವಶಕ್ಕೆ ಪಡೆದು ಭುವನಗಿರಿ ದುರ್ಗ ಎಂದು ಹೆಸರಿಟ್ಟು ಆಳ್ವಿಕೆ ನಡೆಸಿದರು. ಮಲ್ಲವ ವಂಶದಲ್ಲಿ ಪ್ರಖ್ಯಾತರಾದವರೆಂದರೆ, ಶಿವಪ್ಪ ನಾಯಕ, ರಾಣಿ ಚೆನ್ನಮ್ಮಾಜಿ ಮತ್ತು ರಾಣಿ ವೀರಮ್ಮಾಜಿ. ಛತ್ರಪತಿ ಶಿವಾಜಿ ಮಹಾಹಾರಾಜರ ಮಗನಾದ ರಾಜಾರಾಮನಿಗೆ ಆಶ್ರಯ ನೀಡಿದ್ದು ಕವಲೇದುರ್ಗ ಸಂಸ್ಥಾನ ಎಂಬುದು ಇತಿಹಾಸ ಪುಟದಲ್ಲಿ ದಾಖಲಾಗಿದೆ. ಇದೇ ವಿಷಯವಾಗಿ ಮೊಘಲ್ ದೊರೆ ಔರಂಗಜೇಬನೊಂದಿಗೆ ಯುದ್ಧಮಾಡಿ ಗೆದ್ದ ಕೀರ್ತಿ ರಾಣಿ ಚೆನ್ನಮ್ಮಾಜಿಯವರಿಗೆ ಸಂದಿದೆ. ೧೮ನೇ ಶತಮಾನದಲ್ಲಿ ಮೈಸೂರು ರಾಜ ಹೈದರಾಲಿ ಹಾಗೂ ಟಿಪ್ಪೂ ಸುಲ್ತಾನರ ದಾಳಿಗೆ ಗುರಿಯಾಗಿ ಕವಲೇದುರ್ಗ ಸಾಕಷ್ಟು ನಾಶವಾಯಿತು.

ಕವಲೇ ದುರ್ಗದ ವಿಶೇಷತೆ

ಹೆಜ್ಜೆ ಮೇಲೆ ಹೆಜ್ಜೆಯಿಟ್ಟರೂ ಸದ್ದು ಪ್ರತಿಧ್ವನಿಸುವಷ್ಟು ಪ್ರಶಾಂತ ಹಾಗೂ ಮೌನದ ಪರಿಸರ ಇಲ್ಲಿನದು. ಹಸಿರನ್ನು ಕಣ್ತುಂಬಿಕೊಳ್ಳುವುದು ಮಾತ್ರವಲ್ಲ- ಇತಿಹಾಸದ ಅರಿವನ್ನು ಮನದುಂಬಿಕೊಳ್ಳಲು ಇಲ್ಲಿ ಸಾಕಷ್ಟು ಅವಕಾಶವಿದೆ. ಇತಿಹಾಸದ ಕುರುಹುಗಳ ಹಿಂದೆ ನಡೆದರೆ, ಈ ದುರ್ಗವನ್ನು ಹಿಂದೊಮ್ಮೆ ಭುವನಗಿರಿ ದುರ್ಗ, ಕೌಲೇದುರ್ಗ ಎಂದು ಕರೆಯುತ್ತಿದ್ದು ದಾಗಿ ತಿಳಿದು ಬರುತ್ತದೆ. ಕವಲೇದುರ್ಗದಲ್ಲಿನ ಆಕರ್ಷಣೆಗಳಲ್ಲಿ ತಿಮ್ಮಣ್ಣನಾಯಕನ ಕೆರೆಯೂ ಒಂದು. ಹದಿನೆಂಟು ಎಕರೆ ವಿಸ್ತೀರ್ಣದ ಈ ಕೆರೆ, ಹಕ್ಕಿಗಳ ಚಿಲಿಪಿಲಿ ಕಲರವದಿಂದ, ಮೀನುಗಳ ಮುಳುಗಾಟ ದಿಂದ, ಬೆಳ್ಳಕ್ಕಿಯ ಹಿಂಡಿನಿಂದ ಗಮನ ಸೆಳೆಯುತ್ತದೆ. ಕೆರೆಯ ಮೇಲಿನಿಂದ ತೇಲಿ ಬರುವ ತಂಗಾಳಿಗೆ ಮೈಯೊಡ್ಡಿ ಜಲಚರಗಳ ದನಿ ಕೇಳಿಸಿಕೊಳ್ಳುವುದು ಹಿತವಾದ ಅನುಭವ. ಕೆಳದಿ ಅರಸರು ನಿರ್ಮಿಸಿದ ವೀರಶೈವ ಮಠ ಕವಲೇದುರ್ಗದಲ್ಲಿದೆ. ಈ ಅರಸರಿಗೆ ಏಳರ ಮೇಲೆ ವಿಶೇಷ ಮಮಕಾರ ಇದ್ದಿರಬೇಕು. ಆ ಕಾರಣದಿಂದಲೇ ಏಳು ಕೆರೆಗಳು ಇಲ್ಲಿವೆ. ಇಷ್ಟುಮಾತ್ರವಲ್ಲ, ಅರಸರು ಆರಾಧಿಸುತ್ತಿದ್ದ ನಾಗದೇವರಿಗೆ ಕೂಡ ಏಳು ಹೆಡೆ! ಮಠದಿಂದ ಸುಮಾರು ಒಂದು ಕಿ.ಮೀ. ಮುಂದೆ ಸಾಗಿದರೆ ಕೋಟೆಯ ಮುಖ್ಯದ್ವಾರ ಎದುರಾಗುತ್ತದೆ. ಮಹಾದ್ವಾರ ಪ್ರವೇಶಿಸಿದಂತೆ ಸುಮಾರು ೫೦-೬೦ ಅಡಿ ಎತ್ತರದ ಗೋಡೆ ನೋಡಬಹುದು.

ಗೋಡೆಯ ಮೇಲೆ ಅಂದಿನ ಕಾಲದ ಚಿತ್ರಕಲೆಯನ್ನು ನೋಡಬಹುದು. ಕಾವಲುಗಾರರು ಉಳಿದುಕೊಳ್ಳಲು ಮಾಡಿದ್ದ ಚೌಕಾಕಾರದ ಕಾವಲುಗಾರ ಕೊಠಡಿ ಹಾಗೂ ಒಳಭಾಗದಲ್ಲಿ ಮುಖ ಮಂಟಪವನ್ನು ಎರಡನೇ ಮಹಾದ್ವಾರ ಹಾಯುವಾಗ ನೋಡಬಹುದು.ಮಂಟಪದ ಎಡಭಾಗದಲ್ಲಿ ನಾಗತೀರ್ಥವೆಂಬ ಕೊಳ ಹಾಗೂ ಸುಮಾರು ೬ ಅಡಿ ಎತ್ತರದ ಏಳು ಹೆಡೆಯ ಏಕಶಿಲಾ ನಾಗರ ಶಿಲ್ಪವನ್ನು ನೋಡಬಹುದು. ಮೂರನೆ ಮಹಾದ್ವಾರ ದ ಬಲಭಾಗದಲ್ಲಿ ನಗಾರಿ ಕಟ್ಟೆಯಿದೆ. ಈ ಪರಿಸರದಲ್ಲಿ ಒಂದು ಸುರಂಗ ಮಾರ್ಗವನ್ನೂ ಕಾಣಬಹುದು. ನಾಲ್ಕನೆಯ ಮಹಾದ್ವಾರ ತಲುಪಲು ಇಳಿಜಾರಿನ ಹಾಸುಗಲ್ಲನ್ನು ದಾಟಬೇ ಕು. ಅಲ್ಲಿಯೂ ಒಂದು ಮುಖ ಮಂಟಪವನ್ನು ನೋಡಬಹುದು. ಕವಲೇದುರ್ಗದಲ್ಲಿ ವಿಶ್ವನಾಥೇಶ್ವರ ದೇವಾಲಯವಿದೆ. ಈ ದೇವಾಲಯದ ಹೊರಭಾಗದಲ್ಲಿ ಅನೇಕ ಕಲಾಕೃತಿಗಳನ್ನು ಕಾಣಬಹುದು. ಕಾಶಿಯಿಂದ ತಂದ ಅಮೃತಶಿಲೆಯ ವಿಶ್ವನಾಥೇಶ್ವರನ ವಿಗ್ರಹವನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆಯಂತೆ. ಅರಸರ ಕಾಲದಲ್ಲಿ ತುಪ್ಪ ಹಾಗೂ ಎಣ್ಣೆಯನ್ನು ಶೇಖರಿಸಲು ಉಪಯೋಗಿಸುತ್ತಿದ್ದ ಬಾವಿಯನ್ನು ದುರ್ಗದಲ್ಲಿ ನೋಡಬಹುದು. ಇದಕ್ಕೆ ಎಣ್ಣೆ ಹಾಗೂ ತುಪ್ಪದ ಬಾವಿಯೆಂದೇ ಈಗಲೂ ಕರೆಯುತ್ತಾರೆ. ಶಿಸ್ತಿನ ಶಿವಪ್ಪನಾಯಕನ ಕಾಲದ ಏತನೀರಾವರಿ ಪದ್ಧತಿ ಬಳಕೆಯ ಕುರುಹುಗಳು ಕವಲೇದುರ್ಗದಲ್ಲಿ ಈಗಲೂ ಕಾಣಬಹುದು. ದಟ್ಟ ಅರಣ್ಯದ ನಡುವೆ ಸುಮಾರು ಅರ್ಧ ಎಕರೆ ಪ್ರದೇಶದಲ್ಲಿರುವ ಅರಮನೆ ಕಲ್ಲು ಕಂಬಗಳ ಆಸರೆ ಹೊಂದಿದೆ. ಅರಮನೆಗೀಗ ಆಕಾಶವೇ ಛಾವಣಿ. ಕಂಬಗಳು ಮತ್ತು ಮಣ್ಣಿನ ಗೋಡೆಗಳು ಮಾತ್ರ ಉಳಿದಿವೆ.

ನರಸಿಂಹ ಗಡ – ಗಡಾಯಿಕಲ್ಲು

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕೆಂದರೆ ಎಲ್ಲರ ಮುಂದೆ ಮೂಡುವ ದೃಶ್ಯ ನರಸಿಂಹ ಗಡ (ಗಡಾಯಿ ಕಲ್ಲು). ಬೆಳ್ತಂಗಡಿ ತಾಲೂಕಿನಲ್ಲೇ ಅತ್ಯಂತ ಆಕರ್ಷಣೆಯ, ಚಾರಣಿಗರಿಗೆ, ಪ್ರವಾಸಿಗರಿಗೆ ಪ್ರಿಯ ತಾಣವಾಗಿ ಈ ಕಲ್ಲು ವಿರಾಜಿಸುತ್ತಿದೆ. ಕುದುರೆ ಮುಖ ರಾಷ್ಟ್ರೀಯ ಉದ್ಯಾನವನದಲ್ಲಿರುವ `ನಡ’ ಗ್ರಾಮಕ್ಕೆ ಸೇರಿರುವ  ಮತ್ತು ರಾಜ್ಯ ಹೆದ್ದಾರಿಗೆ ಸನಿಹದಲ್ಲಿರುವ ಈ ಗಡಾಯಿಕಲ್ಲು ಹಲವಾರು ಐತಿಹ್ಯಗಳನ್ನೂ ಚಾರಿತ್ರಿಕ ದಾಖಲೆಗಳನ್ನೂ ಹೊಂದಿದೆ. ಅದಮ್ಯ ಪ್ರಾಕೃತಿಕ ಸೌಂದರ್ಯವನ್ನು ಹೊಂದಿರುವ ಈ ಕಲ್ಲು ಪಶ್ಚಿಮ ಘಟ್ಟದ ಹಿನ್ನಲೆಯೊಂದಿಗೆ ಶೋಭಿಸುತ್ತಾ ಚಾರಣಿಗರನ್ನು, ಪ್ರಕೃತಿ ಪ್ರಿಯರನ್ನು ತನ್ನೆಡೆಗೆ ಕೈ ಬೀಸಿ ಕರೆಯುತ್ತಿದೆ.

೧ ನೇ ವೀರನರಸಿಂಹ ಬಲ್ಲಾಳನು ಬೆಳ್ತಂಗಡಿಯ ಹತ್ತಿರವಿರುವ ಬೆಟ್ಟದಲ್ಲಿ ಒಂದು ಪ್ರವಾಸಿಧಾಮ ನಿರ್ಮಿಸಲು ಯೋಚಿಸಿದನು. ಅದರಂತೆ ಆ ಬೆಟ್ಟದ ಶಿಖರದವರೆಗೆ ಮೆಟ್ಟಿಲುಗಳನ್ನು ಕಡಿಸಿ ಅದರ ಮೇಲೆ ಸುತ್ತಲೂ ಕೋಟೆಕಟ್ಟಿ ಚಾರಿತ್ರಿಕ ಗಡವಾಗಿ ಉಳಿವಂತೆ ಮಾಡಿಸಿ ಕ್ರಿಸ್ತಶಕ ೧೧೫೫ ರಲ್ಲಿ “ನರಸಿಂಹಗಡ”ವೆಂದು ತನ್ನ ಹೆಸರನ್ನು ಇಟ್ಟು ಉತ್ತಮ ಪ್ರವಾಸಿಧಾಮದ ಉದ್ಘಾಟನೆ ಕೂಡಾ ಮಾಡಿಸಿದನು. ಆ ನರಸಿಂಹ ಗಡದ ಕೆಳಗೆ ದೊಡ್ಡ ಪಟ್ಟಣದ ನಿರ್ಮಾಣವಾಯಿತು. ಎಲ್ಲಾ ಜಾತಿಯವರ ಒಂದು ಸಾವಿರ ಮನೆಗಳನ್ನು ಸುತ್ತಲೂ ಕಟ್ಟಿಸಿದನು. “ಚತುಸಂಗ ಪೇಟೆ” ಎಂದು ಕರೆದನು. ಮೈಸೂರಿನಿಂದ ಬ್ರಾಹ್ಮಣರನ್ನು ಕೂಡಾ ಅಲ್ಲಿಗೆ ಕರೆಸಿದನು. ಆ ಗಡದ ಉತ್ತರ ಈಶಾನ್ಯದಲ್ಲಿ ವನದುರ್ಗೆ, ನಾಗ ಬ್ರಹ್ಮಸ್ಥಾನಗಳು ಕೂಡಾ ಇದ್ದು ಆ ಸ್ಥಾನಗಳನ್ನು ಅಭಿವೃದ್ಧಿ ಮಾಡಿಸಿದನು. ಈ ದೇವಸ್ಥಾನದ ಕುರುಹು ಈಗಲೂ ಇದೆ. ಅಲ್ಲಿಗೆ “ಕೂಡೇಲು” ಎಂದು ಕರೆಯುತ್ತಾರೆ. ನಂತರ ವೀರನರಸಿಂಹ ಬಲ್ಲಾಳನು ದ್ವಾರ ಸಮುದ್ರಕ್ಕೆ ಹೋದನು.

೪ನೇ ಲಕ್ಷ್ಮುಮಪ್ಪನ ತರುವಾಯ ೪ ನೇ ಕಾಮಪ್ಪರಸ ಬಂಗರಾಜನಿಗೆ ಕ್ರಿಸ್ತಶಕ ೧೭೬೭ ರಲ್ಲಿ ಪಟ್ಟವಾಯಿತು. ಇತನು ಕ್ರಿಸ್ತಶಕ ೧೭೯೯ ರ ವರೆಗೆ ರಾಜ್ಯವಾಳಿದನು. ೧೭೬೮ ರಲ್ಲಿ ಇಂಗ್ಲೀಷರು ಮಂಗಳೂರನ್ನು ಹಿಡಿದಾಗ, ಇಲ್ಲಿ ರಾಜಾಳುವಿಕೆಯು ಕೈತಪ್ಪಿತು. ಬಂಗರಾಜ ಕಾಮಪ್ಪಾಸನು ಅಧಿಕಾರ ಕಳಕೊಮ್ಡು ಹೈದರಾಲಿಯಲ್ಲಿ ತನ್ನ ಕಷ್ಟವನ್ನು ಹೇಳಿಕೊಂಡಾಗ ಅವನು ೧೦೦ ವರಹ ಉತ್ಪತ್ತಿ ಬರುವ ಗದ್ದೆ ಮತ್ತು ತೋಟವನ್ನು ಅರಸನಿಗೆ ಬಿಟ್ಟುಕೊಟ್ಟು ಅದನ್ನು ಹಿಂದೆ ಪಡೆಯದಂತೆ ಶೇಖಾಲಿಗೆ ಹೇಳಿ ಹೋದನು. ಹೈದರನ ನೌಕಾಪಡೆ ೧೭೮೨ ರಲ್ಲಿ ಇಂಗ್ಲೀಷರ ವಶವಾದ ನಂತರ ಆಕಸ್ಮಾತ್ ವ್ಯಾಧಿಪೇಡಿತನಾಗಿ ಹೈದರಾಲಿ ಮರಣವಪ್ಪಿದನು. ಹೈದರನು ಕಾಲವಾದ ನಂತರ ಟಿಪ್ಪುಸುಲ್ತಾನನು ಮೈಸೂರಿನ ಸರ್ವಾಧಿಕಾರಿಯಾದನು. ೧೭೮೩ ನೇ ಇಸವಿಯಲ್ಲಿ ಮಂಗಳೂರನ್ನು ಇಂಗ್ಲೀಷರ ಸೈನ್ಯ ವಶಪಡಿಸಿಕೊಂಡಿತು. ೧೭೮೪ ರಲ್ಲಿ ಅದನ್ನು ಟಿಪ್ಪು ವಶಪಡಿಸಿಕೊಂಡನು. ಈ ಸಮಯದಲ್ಲಿ ಆತನ ತಾಯಿ ಜಮೀಲಾಬೀಬಿಗೆ ಆರೋಗ್ಯ ಕೆಟ್ಟಿತು. ಆಕೆಯನ್ನು ವಿಶ್ರಾಂತಿಗಾಗಿ ನರಸಿಂಹಗಡಕ್ಕೆ ಕರೆದೊಯ್ದನು. ಅಲ್ಲಿ ಆಕೆಯ ಆರೋಗ್ಯ ಸುಧಾರಿಸಿತು. ಆ ಸಂತೋಷಕ್ಕೆ ಆಕೆಯ ಹೆಸರನ್ನು ನರಸಿಂಹಗಡಕ್ಕೆ ಇಟ್ಟು “ಜಮಾಲಾಬಾದ್ ಕೋಟೆ” ಎಂದು ಕರೆದನು. ೧೭೮೫ ರಲ್ಲಿ ನೀಲೆಶ್ವರದ ಅರಸ ದಂಗೆ ಎದ್ದ ಕಾರಣ ಆತನನ್ನು ಹಿಡಿದು ಗಲ್ಲೀಗೆರಿಸಿದರು. ೪ನೇ ಕಾಮಪ್ಪ ಬಂಗರಾಜನ ನಂದಾವರದ ಅರಮನೆಯನ್ನು ಸ್ಯಾರೆ ಬ್ಯಾರಿಯು ಪೂರ್ವ ದ್ವೇಷದಿಂದ ಸುಲಿಗೆ ಮಾಡಿದನು. ಜಮಾಲಾಬಾದಿನಲ್ಲಿ ಟಿಪ್ಪುಸುಲ್ತಾನನ ಖಿಲ್ಲೆದಾರನೋರ್ವನು ಸ್ಯಾರೆ ಬ್ಯಾರಿಗೆ ಆಪ್ತನಾದ ಕಾರಣ ಉಪಾಯದಲ್ಲಿ ಕಾಮಪ್ಪರಸ ಬಂಗನನ್ನು ಅಲ್ಲಿಗೆ ಕರೆಸಿ ಗಲ್ಲಿಗೆ ಕೊಟ್ಟನು.

ಕ್ರಿಸ್ತಶಕ ೧೭೯೯ ನೇ ಶತಮಾನದಲ್ಲಿ ಟಿಪ್ಪು ಸುಲ್ತಾನನನ್ನು ಇಂಗ್ಲೀಷರು ಶ್ರೀರಂಗಪಟ್ಟಣದಲ್ಲಿ ಕೊಂದರು. ಕರ್ನಾಟಕವು ಇಂಗ್ಲೀಷರ ಪಾಲಿಗೆ ಬಂತು. ಈ ಸಮಯದಲ್ಲಿ ಟಿಪ್ಪು ಸುಲ್ತಾನನ ಸ್ವಾಮಿ ನಿಷ್ಠ ಸೇವಕರು ಬ್ರಿಟಿಷರ ವಿರುದ್ದ ದಂಗೆ ಏಳಲು ಸಂಚು ಹೂಡಿದರು. ಟಿಪ್ಪುವಿನ ಉಪ ಪತ್ನಿಯ ಮಗನಾದ ಫಟೇ ಹೈದರನು ಕಣ್ಣಾನೂರಿಗೆ ಹೋಗಿ ಕೆಲವು ಮುಸ್ಲಿಂ ಯುವಕರಿಗೆ ಯುದ್ಧದ ತರಬೇತಿ ನೀಡಿ ಸಣ್ಣ ಸೈನ್ಯ ಕಟ್ಟಿಕೊಂಡು ತುಳುನಾಡಿಗೆ ಬಂದನು. ಇತ್ತ ಬೇಕಲಕೋಟೆಯಲ್ಲಿ ಟಿಪ್ಪುವಿನ ದಳಪತಿಯಾಗಿದ್ದ ತಿಮ್ಮ ನಾಯಕನು ಇನ್ನೂರು ಮಂದಿ ಸೈನಿಕರೊಡನೆ ಬೆಳ್ತಂಗಡಿ ಹತ್ತಿರದ ನರಸಿಂಹಗಡಕ್ಕೆ ಬಂದನು. ಫಟೇ ಹೈದರ ಮತ್ತು ತಿಮ್ಮ ನಾಯಕ ಈ ಕೋಟೆ ಹತ್ತಿ ಸೈನಿಕರಿಗೆ ತರಬೇತಿ ನೀಡುತ್ತಾ ಇಂಗ್ಲೀಷರೊಡನೆ ಹೋರಾಡಲು ಸಂಚು ಮಾಡಿದರು. ಕೊಯಮುತ್ತೂರಿನಲ್ಲಿ ಟಿಪ್ಪುವಿನ ಕರಣಿಕನಾಗಿದ್ದ ಪತ್ತುಮುಡಿ ಸುಬ್ರಾಯನೆಂಬವನು ಆಂಗ್ಲರ ವಿರುದ್ಧ ಹೋರಾಡಲು ತನ್ನ ಆಪ್ತರಾದ ನೂರು ಮಂದಿ ಅನುಯಾಯಿಗಳೊಂದಿಗೆ ಆಂಗ್ಲರಿಂದ ನೇಮಿಸಲ್ಪಟ್ಟ ಅವರ ಅಧಿಕಾರಿಗಳನ್ನು ಹೊಡೆದೊಡಿಸುವ ಸಂಚನ್ನು ರೂಪಿಸುತ್ತಾ ಸಂಪಾಜೆ ಘಾಟಿ ಮಾರ್ಗವಾಗಿ ಉಪ್ಪಿನಂಗಡಿಗೆ ಬಂದನು.

ಈ ಸಮಯದಲ್ಲಿ ದಕ್ಷಿಣ ಜಿಲ್ಲೆಯ ಕಲೆಕ್ಟರ್ ಕ್ಯಾಪ್ಟನ್ ಮುನ್ರೋವಿನ ಆದೇಶದಂತೆ ಕಡಬದ ತಹಶೀಲ್ದಾರನ ಮುಖಂಡತ್ವದಲ್ಲಿ ಇನ್ನೂರು ಮಂದಿ ಆಂಗ್ಲ ಸೈನಿಕರು ಸುಬ್ರಾಯನೊಡನೆ ಹೋರಾಟಕ್ಕೆ ಎದುರಾದರು. ಆಗ ಊರವರು ಯಾರೂ ಸುಬ್ರಾಯನಿಗೆ ಸಹಕಾರ ನೀಡಲಿಲ್ಲ. ಸುಬ್ರಾಯನು ಅವರೊಡನೆ ಕಾದಾಟ ಮಾಡಲಾಗದೆ ಶಿಶಿಲೆಯಲ್ಲಿ ಆಶ್ರಯ ಪಡೆದನಂತೆ. ನರಸಿಂಹಗಡವನ್ನು ಕಾಯುತ್ತಿರುವ ಇಂಗ್ಲೀಷ್ ಸೈನಿಕರನ್ನು ಫಟೇ ಹೈದರ ಮತ್ತು ತಿಮ್ಮ ನಾಯಕರು ಕೊಂದು ಹಾಕಿದರು. ಪತ್ತುಮುಡಿ ಸುಬ್ರಾಯನು ಉಗ್ಗೆ ಹಳ್ಳಿಗೆ ಹೋಗಿ ಅಲ್ಲಿಯ ಪಾಳೇಗಾರರ ನೆರವು ಪಡೆದು ಐಗೂರು ಕೃಷ್ಣಪ್ಪ ನಾಯಕನೊಡನೆ ಜಮಾಲಾಬಾದ್ ಕೋಟೆಗೆ ಬಂದು ಫಟೇ ಹೈದರ ಮತ್ತು ತಿಮ್ಮ ನಾಯಕನನ್ನು ಕೂಡಿಕೊಂಡು ಆಂಗ್ಲರ ವಿರುದ್ಧ ಹೋರಾಡಲು ಸಿದ್ಧತೆ ಮಾಡಿದರು. ಈ ವಿಚಾರವರಿತ ಕಡಬದ ತಹಶಿಲ್ದಾರನು ತನ್ನ ಇಂಗ್ಲೀಷ್ ಸೈನಿಕರೊಡನೆ ಬೆಳ್ತಂಗಡಿಗೆ ಬಂದು ಚಂದ್ಕೂರಿನಲ್ಲಿ ಪಾಳ್ಯ ಬಿಟ್ಟು ಶತ್ರುಗಳ ನಾಶಕ್ಕೆ ಹೊಂಚು ಹಾಕಿದನು. ಈ ಸಮಯದಲ್ಲಿ ಊರಿನ ಕೆಲವು ಮುಖಂಡರು ಜಮಲಾಬಾದಿನಲ್ಲಿ ಇರುವ ಶಸ್ತ್ರಾಗಾರ ಮದ್ದಿನ ಮನೆಗಳ ಗುಟ್ಟನ್ನು ಹೇಳಿ ಇಂಗ್ಲೀಷರಿಗೆ ನೆರವು ನೀಡಿದರು. ಇಂಗ್ಲೀಷರು ಫಿರಂಗಿಗಳನ್ನು ಸಿಡಿಸಿ. ಮದ್ದಿನ ಮನೆಯನ್ನು ಸುಟ್ಟರು. ಈ ಸಮಯದಲ್ಲಿ ಕೋಟೆಯಲ್ಲಿದ್ದ ಫಟೇ ಹೈದರ, ತಿಮ್ಮ ನಾಯಕರು ತಪ್ಪಿಸಿಕೊಂಡು ಹೋದರು. ಪತ್ತುಮುಡಿ ಸುಬ್ರಾಯನನ್ನು ಬ್ರಿಟಿಷರು ಕೊಂದು ಹಾಕಿದರು. ಇಂಗ್ಲೀಷರು ಬಹಳ ಪ್ರಯತ್ನದಿಂದ ಕೋಟೆಯನ್ನು ಸ್ವಾಧೀನ ಮಾಡಿಕೊಂಡರು. ಆದರೆ ಫಟೇ ಹೈದರ , ತಿಮ್ಮ ನಾಯಕರಿಗೆ ಆ ಸಮಯದಲ್ಲಿ ತುಳುವರಾರೂ ಸಹಕಾರ ನೀಡದಿರುವುದರಿಂದ ಅವರು ಇಂಗ್ಲೀಷರ ಸೆರೆಯಾಳಾದರು. ಅವರನ್ನು ಬೇಕಲಕೋಟೆಯಲ್ಲಿ ಗಲ್ಲಿಗೇರಿಸಿದರು. ಸ್ವಾತಂತ್ರ್ಯ ಸಮರದ ಕಾಲದಲ್ಲಿ ವೀರನರಸಿಂಹ ಬಲ್ಲಾಳ ಕಟ್ಟಿದ ಕೋಟೆ ಪ್ರಸಿದ್ಧಿ ಪಡೆದಿತ್ತು.