ರಚನೆ: ವಿಜಯದಾಸರು
ಆನಂದ ಆನಂದ ಮತ್ತೆ ಪರಮಾನಂದ || ಪ ||
ಆ ನಂದನ ಕಂದ ಒಲಿಯೆ ಏನಂದದೆ ವೇದವೃಂದಾ || ಅ.ಪ ||
ಆ ಮೊದಲು ಕ್ಷ ಕಾರಾಂತ ಈ ಮಹಾ ವರ್ಣಗಳೆಲ್ಲ
ಸ್ವಾಮಿಯಾದ ವಿಷ್ಣುವಿನ ನಾಮವೆಂದು ತಿಳಿದವಗೆ || ೧ ||
ಜಲ ಕಾಷ್ಠ ಶೈಲ ಗಗನ ನೆಲ ಪವಕ ವಾಯು ತರು
ಫಲ ಪುಷ್ಪ ಬಳ್ಳಿಗಳೊಳಗೆ ಹರಿ ವ್ಯಾಪ್ತನೆಂದರಿತವಗೆ || ೨ ||
ತಾರೋ ಬಾರೋ ಬೀರೊ ಸಾರೊ ಮಾರೊ ಹಾರೊ ಹೋರೊ ಹೀರೊ
ಸೇರೋ ಯಾರೋ ತೋರೊ ಎಂಬುದು ಹರಿಯ ಪ್ರೇರಣೆ ಎಂದರಿತವಗೆ || ೩ ||
ಪೋಪುದು ಬರುತಿಪ್ಪುದು ಮತ್ತೆ ಕೋಪ ಶಾಂತ ಮಾಡುವುದು
ರೂಪು ಲಾವಣ್ಯ ಹರಿಯ ವ್ಯಾಪಾರ ಎಂದರಿತವೆಗೆ || ೪ ||
ಮಧ್ವಶಾಸ್ತ್ರ ಪ್ರವಚನ ಮುದ್ದುಕೃಷ್ಣನ ದರುಶನ
ಶುದ್ಧ ವಿಜಯವಿಠಲನ್ನ ಪೊಂದಿ ಕೊಂಡಾಡುವವಗೆ || ೫ ||
No Responses